Karnataka SSLC Kannada Previous Year Question Paper March 2018 (1st Language)

   

Students can Download Karnataka SSLC Kannada Previous Year Question Paper March 2018 (1st Language), Karnataka SSLC Kannada Model Question Papers with Answers helps you to revise the complete Karnataka State Board Syllabus and score more marks in your examinations.

Karnataka State Syllabus SSLC Kannada Previous Year Question Paper March 2018 (1st Language)

ಸಮಯ: 3 ಗಂಟೆ
ಅಂಕಗಳು – 100

ವಿಭಾಗ – ಎ
(ಪಠ್ಯಗಳ ಅಧ್ಯಯನ-ಗದ್ಯ, ಪದ್ಯ, ಪೋಷಕ ಅಧ್ಯಯನ)

I. ಹಿಂದೊಂದು ವಾಕ್ಯದಲ್ಲಿ ಉತ್ತರ ಬರೆಯುವುದು: 9 × 1 = 9

ಪ್ರಶ್ನೆ 1.
ರಾಹಿಲನು ತುರ್ತು ಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದೇನು ?

ಪ್ರಶ್ನೆ 2.
ಮತಂಗಾಶ್ರಮಕ್ಕೆ ಹೋಗಲು ರಾಮಲಕ್ಷ ಣರಿಗೆ ಸೂಚಿಸಿದವರು ಯಾರು ?

ಪ್ರಶ್ನೆ 3.
ವಚನಕಾರರಿಗೆ ಯಾವುದು ದೇವರಾಗಿತ್ತು ?

ಪ್ರಶ್ನೆ 4.
ಧರ್ಮಬುದ್ದಿಯು ಸೂರ್ಯೊದಯವಾದ ಕೂಡಲೆ ಏನು ಮಾಡಿದನು ?

ಪ್ರಶ್ನೆ 5.
ಯಶೋಭದ್ರೆಯು ರತ್ನಗಂಬಳಿಗಳನ್ನು ಯಾರಿಗೆ ಕೊಟ್ಟಳು ?

ಪ್ರಶ್ನೆ 6.
ಹಕ್ಕಿಯ ಗರಿಯಲ್ಲಿ ಯಾವ ಯಾವ ಬಣ್ಣಗಳಿವೆ ?

ಪ್ರಶ್ನೆ 7.
ಕುಂಪಣಿ ಸರ್ಕಾರ ಹೊರಡಿಸಿದ ಆದೇಶ ಏನು ?

ಪ್ರಶ್ನೆ 8.
ಲವನು ಕುದುರೆಯನ್ನು ಯಾವುದರಿಂದ ಕಟ್ಟದನು ?

ಪ್ರಶ್ನೆ 9.
ಹಾಲುಗಲ್ಲದ ಪುಟ್ಟ ಪೋರಿ ಏನು ಮಾಡುತ್ತಿದ್ದಾಳೆ ?

II.ಈ ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ. 10 × 2 = 20

ಪ್ರಶ್ನೆ 10.
ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಮೂಡಿದ ಪ್ರಶ್ನೆಗಳಾವುವು ?

ಪ್ರಶ್ನೆ 11.
ಅಶೋಕ ಪೈ ಅವರು ಹೇಳಿದ ಸಂಶೋಧನಾ ಸತ್ಯವನ್ನು ತಿಳಿಸಿ.

ಪ್ರಶ್ನೆ 12.
ದುಷ್ಟಬುದ್ಧಿಯು ತನ್ನ ತಂದೆಯನ್ನು ಏಕಾಂತಕ್ಕೆ ಕರೆದು ಹೇಳಿದ ಮಾತುಗಳಾವುವು ?

ಪ್ರಶ್ನೆ 13.
ವೃಷಭಾಂಕನು ಸುಕುಮಾರಸ್ವಾಮಿಗೆ ವ್ಯಾಧಿಯಿದೆ ಎಂದು ಭಾವಿಸಲು ಕಾರಣವೇನು ?

ಪ್ರಶ್ನೆ 14.
ಹಲಗಲಿಯ ಬೇಡರು ದಂಗೆ ಏಳಲು ಕಾರಣವೇನು ?

ಪ್ರಶ್ನೆ 15.
ವಾಲ್ಮೀಕಿ ಆಶ್ರಮಕ್ಕೆ ಯಜ್ಞಾಶ್ವವು ಬಂದ ಬಗೆಯನ್ನು ತಿಳಿಸಿ.

ಪ್ರಶ್ನೆ 16.
ಜಾತಿ ವ್ಯವಸ್ಥೆಯ ಬಗ್ಗೆ ವಿವೇಕಾನಂದರ ಅಭಿಪ್ರಾಯವೇನು ?

ಪ್ರಶ್ನೆ 17.
ಭಗತ್‌ಸಿಂಗ್‌ನ ಸಹೋದರಿಗೆ ಆತನ ಉಪವಾಸದ ಕಾರಣಗಳು ಹೇಗೆ ತಿಳಿದು ಬಂದವು ?

ಪ್ರಶ್ನೆ 18.
ಮೃಗದ ಬಗೆಗೆ ಸುಂದರಿಯ ಮನಸ್ಸು ಏಕೆ ಕರಗುತ್ತಿತ್ತು ?

ಪ್ರಶ್ನೆ 19.
ಉತ್ತರಾಣಿ ಗಿಡ ಎಂಬ ಉತ್ತರ ಬರಲು ಹೇಳಿದ ಒಗಟು ಯಾವುದು ?

ಪ್ರಶ್ನೆ 20.
ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ.

ಪ್ರಶ್ನೆ 21.
ದೇವರೆ ಮರ ಹತ್ತುವಷ್ಟು ಅವಕಾಶ ಕರುಣಿಸು.

ಪ್ರಶ್ನೆ 22.
ಸಾರ್ವಭೌಮರಾ ನೆತ್ತಿಯ ಕುಕ್ಕಿ.

ಪ್ರಶ್ನೆ 23.
ಬೇರೆ ಬಣ್ಣವನೆ ಕಾಣೆ

III. ಕೆಳಗಿನ ಕವಿಗಳ ಜನ್ಮಸ್ಥಳ, ಕಾಲ, ಕೃತಿ ಮತ್ತು ಪ್ರಶಸ್ತಿ / ಬಿರುದುಗಳನ್ನು ಕುರಿತು ವಾಕ್ಯರೂಪದಲ್ಲಿ ಬರೆಯಿರಿ: 2 × 3 = 6

ಪ್ರಶ್ನೆ 24.
ಪು. ತಿ ನರಸಿಂಹಾಚಾರ್:

ಪ್ರಶ್ನೆ 25.
ಪಂಪ:

ಪ್ರಶ್ನೆ 26.
ಈ ಕೆಳಗಿನಪದ್ಯಭಾಗವನ್ನು ಪೂರ್ಣಗೊಳಿಸಿ ಬರೆಯಿರಿ.
Karnataka Board SSLC Kannada Question Paper March 2018 1

ಪ್ರಶ್ನೆ 27.
ಪದ್ಯಭಾಗವನ್ನು ಓದಿ, ಅರ್ಥಮಾಡಿಕೊಂಡು ಮೌಲ್ಯವನ್ನಾಧರಿಸಿ ಸಾರಾಂಶ ಬರೆಯಿರಿ. 1 × 4 =4
ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ
ಹೊಸ ಭರವಸೆಗಳ ಕಟ್ಟೋಣ.
ಮನುಜರ ನಡುವಣ ಅಡ್ಡಗೋಡೆಗಳ ಕೆಡುವುತ ಸೇತುವೆಯಾಗೋಣ.

IV. ಈ ಕೆಳಗಿನ ಪ್ರಶ್ನೆಗಳಿಗೆ ಎಂಟು ಅಥವಾ ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ : 2 × 4 = 8

ಪ್ರಶ್ನೆ 28.
ಮೈಸೂರು ಸಂಸ್ಥಾನ ಮಾದರಿ ಮೈಸೂರು ರಾಜ್ಯ ಎಂಬ ಕೀರ್ತಿಗೆ ಪಾತ್ರವಾಗುವಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಪಾತ್ರವೇನು ? – ವಿವರಿಸಿ.
ಅಥವಾ
ಶಿಕ್ಷಣ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯ ಅವರು ಸಲ್ಲಿಸಿದ ಕೊಡುಗೆಯನ್ನು ತಿಳಿಸಿ.

ಪ್ರಶ್ನೆ 29.
ತನ್ನಜನ್ಮರಹಸ್ಯ ತಿಳಿದಾಗ ಕರ್ಣನ ಮನದಲ್ಲಿ ಮೂಡಿದ ಭಾವನೆಗಳೇನು ? :
ಅಥವಾ
ಶ್ರೀಕೃಷ್ಣನು ಕರ್ಣನಿಗೆ ಒಡ್ಡಿದ ಆಮಿಷಗಳನ್ನು ಕುರಿತು ಬರೆಯಿರಿ.

ಪ್ರಶ್ನೆ 30.
ಈ ಕೆಳಗಿನ ಗದ್ಯಭಾಗವನ್ನು ಮನಸ್ಸಿನಲ್ಲಿ ಓದಿಕೊಂಡು, ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ವಿಶ್ವದ ಬಹುಭಾಷಾ ಪ್ರಪಂಚದಲ್ಲಿ ಸುಮಾರು ನಾಲ್ಕು ಸಾವಿರ ಭಾಷೆಗಳಿವೆ. ಭಾಷೆಗಳನ್ನು ವ್ಯಾವಹಾರಿಕ ಮತ್ತು ಗ್ರಾಂಥಿಕ ಭಾಷೆ ಎಂದು ವಿಂಗಡಿಸಲಾಗಿದೆ. ವ್ಯಾವಹಾರಿಕ ಎಂದರೆ ಜೀವದ ಭಾಷೆ. ಇದರಲ್ಲಿ ಜನರು ಮಾತನಾಡುತ್ತಾರೆ, ವ್ಯವಹರಿಸುತ್ತಾರೆ. ಉದಾಹರಣೆ ಕನ್ನಡ, ತುಳು, ಕೊಂಕಣಿ, ಉರ್ದು ಇತ್ಯಾದಿ. ಅಭಿವೃದ್ಧಿ ಹೊಂದಿ ಗ್ರಂಥ ರಚನೆಯಲ್ಲಿ ಬಳಸುವ ಭಾಷೆಯೇ ಗ್ರಾಂಥಿಕ ಭಾಷೆಗಳು ವ್ಯಾವಹಾರಿಕವಾಗಬೇಕಿಲ್ಲ ಹಾಗೆಯೇ ಎಲ್ಲಾ ವ್ಯಾವಹಾರಿಕ ಭಾಷೆಗಳು ಗ್ರಾಂಥಿಕವಾಗಬೇಕೆಂಬ ನಿಯಮವಿಲ್ಲ. ತುಳು ಒಂದು ಸುಂದರ ವ್ಯಾವಹಾರಿಕ ಭಾಷೆ. ಆದರೆ ಗ್ರಾಂಥಿಕ ಭಾಷೆಯಲ್ಲ. ದೇವಭಾಷೆ ಎನಿಸಿರುವ ಸಂಸ್ಕೃತ ಗ್ರಾಂಥಿಕ ಭಾಷೆಯಾಗಿದೆ. ಆದರೆ ಯಾವ ಪ್ರದೇಶದಲ್ಲಿಯೂ ವ್ಯಾವಹಾರಿಕವಾಗಿಲ್ಲ. ನವಶಿಲಾಯುಗದ ಮಾನವ ತನ್ನ ಸಂಚಾರಿ ಜೀವನವನ್ನು ತ್ಯಜಿಸಿ ಒಂದೆಡೆ ಬೀಡು ಬಿಟ್ಟು ಆಸ್ತಿ, ಮನೆ ಬದುಕು ಮೊದಲಾದ ಭಾವನೆಯನ್ನು ಹೊಂದಲು ಪ್ರಾರಂಭಿಸಿದಂದಿನಿಂದ ಆತನಿಗೆ ಲೆಕ್ಕವಿಡುವ ಅವಶ್ಯಕತೆ ಉಂಟಾಯಿತು. ಓದು ಬರಹ ಬಾರದೆ ಇದ್ದರೂ ತಾನು ಕೆಲಸಕ್ಕೆ ಹೋದ ದಿನಗಳನ್ನು ದಿನನಿತ್ಯ ಗೋಡೆಯ ಮೇಲೆ ಒಂದೊಂದು ಗೆರೆ ಎಳೆದು ಗುರುತಿಸಿ ಕೊನೆಯಲ್ಲಿ ಲೆಕ್ಕಹಾಕಿ ಸಂಬಳ ಪಡೆಯುತ್ತಾನೆ. ಇದನ್ನು ಅಪಿಯ ಉಗಮ ಕಾಲ ಎನ್ನುವರು.

ಪ್ರಶ್ನೆಗಳು :
ಅ) ವ್ಯಾವಹಾರಿಕ ಮತ್ತು ಗ್ರಾಂಥಿಕ ಭಾಷೆಗಳಿಗಿರುವ ವ್ಯತ್ಯಾಸಗಳೇನು ?
ಆ) ಅಪಿಯ ಉಗಮ ಹೇಗಾಯಿತು ?

ವಿಭಾಗ – ಬಿ
(ಅನ್ವಯಿಕ ವ್ಯಾಕರಣ, ಅಲಂಕಾರ ಹಾಗೂ ಛಂದಸ್ಸು)

I. ಈ ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಬರೆಯಿರಿ :

ಪ್ರಶ್ನೆ 31.
ಗುಣಸಂಧಿಗೆ ಉದಾಹರಣೆಯಾಗಿರುವ ಪದ :
ಎ) ಗಿರೀಶ
ಬ) ಮಹರ್ಷಿ
ಸಿ) ಮೈದೋರು
ಡಿ) ಷಣ್ಮುಖ

ಪ್ರಶ್ನೆ 32.
ಒಂದು ಪದವನ್ನೋ, ವಾಕ್ಯವನ್ನೋ ಹೇಳಿ, ಅದಕ್ಕೆ ಸಮಾನಾರ್ಥಕ ಪದವನ್ನೋ, ವಾಕ್ಯವನ್ನೇ ಹೇಳುವಾಗ ಈ ಚಿಹ್ನೆಯನ್ನು ಬಳಸಲಾಗುತ್ತದೆ.
ಎ) ವಾಕ್ಯವೇಷ್ಟನ
ಬಿ) ಉದ್ಧರಣ
ಸಿ) ಆವರಣ
ಡಿ) ವಸೂಚಕ

ಪ್ರಶ್ನೆ 33.
ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿರುವ ವಾಕ್ಯ ಇದು:
ಎ) ಸಂಯೋಜಿತ ವಾಕ್ಯ
ಬಿ) ಸಾಮಾನ್ಯವಾಕ್ಯ
ಸಿ) ಪ್ರಶ್ನಾರ್ಥಕ ವಾಕ್ಯ
ಡಿ) ಮಿಶ್ರವಾಕ್ಯ

ಪ್ರಶ್ನೆ 34.
ಚಂದ್ರನಂತೆ ಪದವು ವ್ಯಾಕರಣಾಂಶದ ಈ ಗುಂಪಿಗೆ ಸೇರಿದೆ. –
ಎ) ತದ್ಧಿತಾಂತಾವ್ಯಯ
ಬಿ) ಕೃದಂತಾವ್ಯಯ
ಸಿ) ತದ್ಧಿತಾಂತ ಭಾವನಾಮ
ಡಿ) ಕೃದಂತ ಭಾವನಾಮ

ಪ್ರಶ್ನೆ 35.
ರಾಹುಲ ಪದವು ನಾಮಪದದ ಈ ಗುಂಪಿಗೆ ಸೇರಿದೆ.
ಎ) ರೂಢನಾಮ
ಬಿ) ಅನ್ವರ್ಥನಾಮ
ಸಿ) ಅಂಕಿತನಾಮ
ಡಿ) ಭಾವನಾಮ

ಪ್ರಶ್ನೆ 36.
ಕೃದಂತಭಾವನಾಮಕ್ಕೆ ಉದಾಹರಣೆಯಾಗಿರುವ ಪದ:
ಎ) ಮಾಡಿದ
ಬಿ) ಮಾಟ
ಸಿ) ಮಾಡಲು
ಡಿ) ಮಾಡುವ

ಪ್ರಶ್ನೆ 37.
ಚತುರ್ಥಿ ವಿಭಕ್ತಿ ಪ್ರತ್ಯಯದ ಕಾರಕಾರ್ಥ:
ಎ) ಸಂಪ್ರದಾನ
ಬಿ) ಸಂಬಂಧ
ಸಿ) ಅಪಾದಾನ
ಡಿ) ಅಧಿಕರಣ

ಪ್ರಶ್ನೆ 38.
ಕ್ರಿಯಾರ್ಥಕಾವ್ಯಯಕ್ಕೆ ಉದಾಹರಣೆಯಾಗಿರುವ ಪದ :
ಎ) ನೀನೇ
ಬಿ) ಆದ್ದರಿಂದ
ಸಿ) ಚೆನ್ನಾಗಿ
ಡಿ) ಸಾಕು

ಪ್ರಶ್ನೆ 39.
ವ್ಯಾಪಾರಿ ಪದದ ತದ್ಭವ ರೂಪ : –
ಎ) ಬಿಕಾರಿ
ಬಿ) ಬೀಮಾರಿ
ಸಿ) ಬೇಹಾರಿ
ಡಿ) ಬಿಹಾರಿ

ಪ್ರಶ್ನೆ 40.
ಮಾಡಳು ಪದವು ಈ ಕ್ರಿಯಾರೂಪಕ್ಕೆ ಸೇರಿದೆ.
ಎ) ವಿದ್ಯರ್ಥಕ
ಬಿ) ಸಂಭಾವನಾರ್ಥಕ
ಸಿ) ಪ್ರಶ್ನಾರ್ಥಕ
ಡಿ) ನಿಷೇಧಾರ್ಥಕ

II. ಈ ಕೆಳಗಿನವುಗಳಲ್ಲಿ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿ ಹೊಂದುವ ಸಂಬಂಧೀ ಪದವನ್ನು ಬರೆಯಿರಿ :

ಪ್ರಶ್ನೆ 41.
ಇನಾಮು : ಅರಬ್ಧ :: ಸಲಾಮು ____________________

ಪ್ರಶ್ನೆ 42.
ಹೊಗೆದೋರು : ಕ್ರಿಯಾಸಮಾಸ : ಚಕ್ರಪಾಣಿ ____________________

ಪ್ರಶ್ನೆ 43.
ಕದಳ : ಬಾಳೆ :: ವಾಜಿ ________________

ಪ್ರಶ್ನೆ 44.
ಹಾಲ್ಲೇನು : ಜೋಡುನುಡಿ :: ಬಟ್ಟಬಯಲು :________________

ಪ್ರಶ್ನೆ 45.
ಪ್ರಸ್ತಾರ ಹಾಕಿ, ಗಣ ವಿಭಾಗಿಸಿ, ಛಂದಸ್ಸಿನ ಹೆಸರನ್ನು ಬರೆಯಿರಿ. 1 × 3 = 3
ಕಾದಿದ ರೆನಜ್ಜ ಪಾಂಡವ
ರಾದ‌ ಮೇಣೀ ದಿನೊಂದೆ ಅಥವಾ ಸಮರದೊ ಳಾಂಮೇ
ಒಡವೆ ಯನರ್ಥಿ ಗಿತ್ತೆನ ವನೀತ ಳಮಂಗು ರುಗಿತ್ತೆ ನೀಗಳೊಂ

ಪ್ರಶ್ನೆ 46.
ಈ ಕೆಳಗಿನ ವಾಕ್ಯದಲ್ಲಿರುವ ಅಲಂಕಾರವನ್ನು ಹೆಸರಿಸಿ, ಲಕ್ಷಣ ಬರದು, ಸಮನ್ವಯಗೊಳಿಸಿ. 1 × 3 = 3
ಮಾತು ಬಲ್ಲವನಿಗೆ ಜಗಳವಿಲ್ಲ ; ಊಟ ಬಲ್ಲವನಿಗೆ ರೋಗವಿಲ್ಲ
ಅಥವಾ
ಸಿಡಿಲ ಸಿಡಿದ್ದಾಂಗಾ ಗುಂಡು ಸುರಿದಾವ

ವಿಭಾಗ – ಸಿ
(ವಾಕ್ಯರಚನೆ ಹಾಗೂ ಬರವಣಿಗೆ ಕೌಶಲ)

ಪ್ರಶ್ನೆ 47.
ಕೆಳಗೆ ಕೊಟ್ಟಿರುವ ಗಾದೆಗಳಲ್ಲಿ ಯಾವುದಾದರೂ ಒಂದನ್ನು ವಿಸ್ತರಿಸಿ ಬರೆಯಿರಿ : 1 × 3 = 3

  • ಕೂಡಿ ಬಾಳಿದರೆ ಸ್ವರ್ಗ ಸುಖ
  • ಮಾಡಿದ್ದುಣೋ ಮಹಾರಾಯ
  • ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ.

ಪ್ರಶ್ನೆ 48.
ನಿಮ್ಮನ್ನು ವಿಜಯಪುರದ ವಿವೇಕಾನಂದ ಪ್ರೌಢಶಾಲೆಯ ‘ಹರ್ಷಿಣಿ’ ಎಂದು ಭಾವಿಸಿಕೊಂಡು, ನಿಮ್ಮ ಶಾಲೆಯಲ್ಲಿ ಆಚರಿಸಿದ ‘ಗಣರಾಜ್ಯೋತ್ಸವ ಆಚರಣೆ’ಯ ವರದಿಯನ್ನು ಪ್ರಕಟಿಸುವಂತೆ ಕೋರಿ ‘ಹೊಸ ದಿಗಂತ’ ದಿನಪತ್ರಿಕೆಯ ಸಂಪಾದಕರಿಗೊಂದು ಮನವಿ ಪತ್ರ ಬರೆಯಿರಿ. 1 × 5 = 5
ಅಥವಾ
ನಿಮ್ಮನ್ನು ಹಾಸನಾ ಪ್ರೌಢಶಾಲೆಯ ‘ಅಶೋಕ’ ಎಂದು ಭಾವಿಸಿಕೊಂಡು ನಿಮ್ಮ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದ ವಿವರವನ್ನು ತಿಳಿಸಿ, ಮೈಸೂರಿನಲ್ಲಿರುವ ‘ಜಯಲಕ್ಷಿ ‘ ಎಂಬ ಹೆಸರಿನ ತಾಯಿಯವರಿಗೊಂದು ಪತ್ರ ಬರೆಯಿರಿ.

ಪ್ರಶ್ನೆ 49.
ಈ ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಕುರಿತು ಹದಿನೈದು ವಾಕ್ಯಗಳಿಗೆ ಕಡಿಮೆ ಇಲ್ಲದಂತೆ ಪ್ರಬಂಧ ಬರೆಯಿರಿ. 1 × 5 = 5

  • ತ್ಯಾಜ್ಯವಸ್ತುಗಳ ನಿರ್ವಹಣೆ
  • ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಯಲ್ಲಿ ಸಾಮಾಜಿಕ ಜಾಲತಾಣಗಳ ಸದ್ಬಳಕೆ
  • ಕರ್ನಾಟಕದ ನದಿ ನೀರಿನ ಸಮಸ್ಯೆಗಳು

ಪ್ರಥಮ ಭಾಷೆ ಕನ್ನಡ

I
ಉತ್ತರ 1:
ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗೆ ಔಷಧ ಮತ್ತು ಶಸ್ತ್ರಚಿಕಿತ್ಸಾ ಸಾಮಾನುಗಳ ಪೆಟ್ಟಿಗೆಯನ್ನು ಭದ್ರವಾಗಿ ಹಿಡಿದುಕೊಂಡಿದ್ದನು.

ಉತ್ತರ 2:
ಮತಂಗಾಶ್ರಮಕ್ಕೆ ಹೋಗಲು ರಾಮಲಕ್ಷ್ಮಣರಿಗೆ ಸೂಚಿಸಿದವರು ದನು.

ಉತ್ತರ 3:
ವಚನಕಾರರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು.

ಉತ್ತರ 4:
ಧರ್ಮಬುದ್ದಿಯು ಸೂರ್ಯೋದಯವಾದ ಕೂಡಲೆ ದೇವಗುರು ದ್ವಿಜರ ಪೂಜೆ ಮಾಡಿದನು.

ಉತ್ತರ 5:
ಯಶೋಭದ್ರೆಯು ರತ್ನಗಂಬಳಿಗಳನ್ನು ತನ್ನ ಸೊಸೆಯಂದಿರಿಗೆ ಕೊಟ್ಟಳು.

ಉತ್ತರ 6:
ಹಕ್ಕಿಯ ಗರಿಯಲ್ಲಿ ಬಿಳಿ ಮತ್ತು ಹೊಳೆಯುವ ಬಣ್ಣಗಳಿವೆ.

ಉತ್ತರ 7:
ಕುಂಪಣಿ ಸರ್ಕಾರ ನಿಶ್ಯಸ್ತ್ರೀಕರಣ ಆದೇಶ ಹೊರಡಿಸಿತು.

ಉತ್ತರ 8:
ಲವನು ಕುದುರೆಯನ್ನು ತನ್ನ ಉತ್ತರೀಯದಿಂದ ಕಟ್ಟಿದನು.

ಉತ್ತರ 9:
ಹಾಲುಗಲ್ಲದ ಪುಟ್ಟ ಪೋರಿ ಮುಸುರೆ ತಿಕ್ಕುತ್ತಿದ್ದಾಳೆ.

II.
ಉತ್ತರ 10:
ಆ ಮಹಿಳೆ ಯಾವ ಅಪಾಯದಲ್ಲಿ ಸಿಲುಕಿದ್ದಾಳೆ ? ಆ ಮನೆಯೊಳಗೆ ಏನು ಸಂಭವಿಸುತ್ತಿದೆ ? ತಾನೀಗ ಕದವನ್ನು ತಟ್ಟಿದರೆ ಪರಿಣಾಮವೇನಾಗಬಹುದು? ಗಡಿ ಪ್ರದೇಶದಲ್ಲಿ ವಿಮಾನದಾಳಿಯಿಂದ ರಕ್ಷಿಸಲು ಬ್ಲಾಕ್ ಔಟ್ ನಿಯಮ ಪಾಲಿಸಲಾಗುತ್ತಿದೆ. ಇಂತಹ ಸಮಯದಲ್ಲಿ ಆ ಮನೆಯೊಳಗೆ ಯಾವ ರೀತಿಯ ಕ್ರೌರ್ಯ ನಡೆಯುತ್ತಿದೆ ? ಎಂಬ ಪ್ರಶ್ನೆಗಳು ರಾಹಿಲನ ಮನದಲ್ಲಿ ಮೂಡಿದವು.

ಉತ್ತರ 11:
ಡಾ. ಅಶೋಕ ಪೈ ಅವರು ಮನಸ್ಸಿನ ಬಗ್ಗೆ ನಡೆದ ಒಂದು ಸಂಶೋಧನಾ ಸತ್ಯವನ್ನು ಹೀಗೆ ಹೇಳಿದ್ದಾರೆ. ಕೆಲವರು ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿದ್ದಾಗ, ಇನ್ನು ಕೆಲವರು ಇದರ ಅರಿವಿಲ್ಲದೆ ತಮ್ಮಷ್ಟಕ್ಕೆ ತಾವು ಪಕ್ಕದ ಕೊಠಡಿಯಲ್ಲಿ ಮಾತನಾಡುತ್ತಿರುತ್ತಾರೆ. ಟೆಲಿವಿಷನ್‌ನಲ್ಲಿ ಬರುವ ಕೋಲೆಯ ದೃಶ್ಯ ನೋಡುತ್ತಿರುವವರ ದುಃಖದ ಭಾವನೆ ಪಕ್ಕದ ಕೊಠಡಿಯಲ್ಲಿರುವವರ ಮನಸಿನಲ್ಲೂ ದುಗುಡ ಉಂಟುಮಾಡುತ್ತದೆ. ನೃತ್ಯದ ದೃಶ್ಯ ಖುಷಿಯ ಭಾವನೆ ಉಂಟುಮಾಡುತ್ತದೆ. ಯಾವ ಜೀವಿಯೂ ತನ್ನಷ್ಟಕ್ಕೆ ತಾನಿರುವುದಿಲ್ಲ. ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಎಲ್ಲಾ ಜೀವಿಗಳಿಗೂ ಆಗುತ್ತದೆ ಎಂದಿದ್ದಾರೆ.

ಉತ್ತರ 12:
ದುಷಬುದಿಯು ಮನೆಗೆ ಬಂದವನೆ ತನ್ನ ತಂದೆಯ ಕೈಹಿಡಿದು ಏಕಾಂತಕ್ಕೆ ಕರೆದುಕೊಂಡು ಹೋಗಿ ನಡೆದ ವೃತ್ತಾಂತವನ್ನೆಲ್ಲ ತಿಳಿಸುತ್ತಾನೆ. “ನಿಮ್ಮ ಒಂದು ವಚನದಿಂದ ನಮ್ಮ ಪರಿವಾರವೆಲ್ಲ ಹಲವು ಕಾಲ ಹಸಿಯದೆ ಸುಖವಾಗಿ ಬಾಳಬಹುದು. ನೀವು ಆ ಮರದ ಪೊಟರೆಯಲ್ಲಿ ಅಡಗಿ ಕುಳಿತು ಧರ್ಮಬುದ್ಧಿಯೇ ಹೊನ್ನನ್ನೆಲ್ಲವನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ನುಡಿಯಬೇಕು” ಎಂದು ತನ್ನ ತಂದೆಗೆ ಹೇಳುತ್ತಾನೆ.

ಉತ್ತರ 13:
ವೃಷಭಾಂಕ ಮತ್ತು ಸುಕುಮಾರಸ್ವಾಮಿಯನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ, ಬಂಧುಗಳು, ಪರಿವಾರದವರು ಶುಭಕರವಾದ ಬಿಳಿ ಸಾಸಿವೆಯ ಅಕ್ಷತೆಯನ್ನು ಹಾಕಿದಾಗ ಸುಕುಮಾರ ಸ್ವಾಮಿಗೆ ಒತ್ತಿದಂತಾಗಿ ಸೊಂಟವನ್ನು ಅಲುಗಾಡಿಸುತ್ತಾನೆ. ದೀಪವನ್ನು ನೋಡಿದಾಗ ಕಣ್ಣೀರು ಸುರಿಸುತ್ತಾನೆ. ಊಟ ಮಾಡುವಾಗ ಅರ್ಧ ಆಹಾರವನ್ನು ನುಂಗಿ, ಅರ್ಧ ಆಹಾರವನ್ನು ಉಗುಳುವುದನ್ನು ಕಂಡು ಆಹಾರದ ಮೇಲಿನ ಅರುಚಿಯಿಂದ ಹೀಗೆ ಮಾಡುತ್ತಿದ್ದಾನೆ. ಈತನಿಗೆ ಏನೋ ವ್ಯಾಧಿಯಿರಬಹುದೆಂದು ಅರಸನು ಭಾವಿಸುತ್ತಾನೆ.

ಉತ್ತರ 14:
ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ಆಡಳಿತದ ಸೂತ್ರ ಹಿಡಿದು ನಿಶ್ಯಸ್ತ್ರೀಕರಣ ಕಾಯಿದೆ ಹೇರಿದರು. ಇದರಂತೆ ಸರಕಾರದ ಅನುಮತಿಯಿಲ್ಲದೆ ಶಸ್ತ್ರಾಸ್ತ್ರ ಹೊಂದುವಂತಿಲ್ಲ. ಇದ್ದ ಆಯುಧಗಳನ್ನು ಹಿಂದಿರುಗಿಸಬೇಕಾಯಿತು. ಹಲಗಲಿಯ ಬೇಡರು ವಿರೋಧಿಸುತ್ತಾರೆ. ಬೇಡರಾಗಿರುವುದರಿಂದ ಆಯುಧವಿಲ್ಲದೆ ಬದುಕುವುದು ಅಸಾಧ್ಯ. ಅಲ್ಲದೆ ಗುಲಾಮಗಿರಿಯನ್ನು ಒಪ್ಪಿಕೊಂಡಂತಾಗುತ್ತದೆ ಎಂದು ಕಾರಕೂನನ ಕಪಾಳಕ್ಕೆ ಗುಲಾಮಗಿರಿಯನ್ನು ಒಪ್ಪಿಕೊಂಡಂತಾಗುತ್ತದೆ ಎಂದು ಕಾರಕೂನನ ಕಪಾಳಕ್ಕೆ ಹೊಡೆಯುತ್ತಾರೆ. ಸುದ್ದಿ ತಿಳಿದ ಸಾಹೇಬ ಮತ್ತಷ್ಟು ಸೈನ್ಯವನ್ನು ಕಳಿಸುತ್ತಾನೆ. ರಾಮ ಬಾಲ, ಜಡಗ, ಹನುಮ ಮೊದಲಾದ ವೀರರು ತಮ್ಮಲ್ಲಿದ್ದ ಆಯುಧಗಳನ್ನು ಕೊಡಲೊಪ್ಪದೆ ದಂಗೆ ಎದ್ದರು.

ಉತ್ತರ 15:
ರಘುವಂಶದ ರಾಜನಾದ ಶ್ರೀರಾಮನ ಯಾಗದ ಕುದುರೆ ಎಂದು ತಿಳಿದು ಪರಾಕ್ರಮಿಗಳಾದ ರಾಜರು ಕುದುರೆಗೆ ನಮಸ್ಕರಿಸಿ ಕಳಿಸುತ್ತಿದ್ದರು. ಹೀಗೆ ಯಾಗದ ಕುದುರೆ ಭೂಮಿಯಲ್ಲಿ ಸಂಚರಿಸುತ್ತ ವಾಲ್ಮೀಕಿ ಮುನಿಯ ಆಶ್ರಮದ ಕಡೆಗೆ ಬರುತ್ತದೆ. ಮುನಿಯ ಆಶ್ರಮದ ವಿನಿಯೋಗಕ್ಕಾಗಿ ಇದ್ದ ಉದ್ಯಾನವನದಲ್ಲಿ ಬೆಳೆದಿದ್ದ ಹಸಿರು ಹುಲ್ಲನ್ನು ನೋಡಿ, ತಿನ್ನಲು ಬಯಸಿ ಯಜ್ಞಾಶ್ವ ವಾಲ್ಮೀಕಿಯ ಆಶ್ರಮದ ವನವನ್ನು ಪ್ರವೇಶಿಸುತ್ತದೆ.

ಉತ್ತರ 16:
ಜಾತಿ ಎಂಬುದು ಸಮಾಜದ ಒಂದು ಆಂತರಿಕ ಭಾಗವಾಗಿದೆ. ಹಿಂದೆ ವಿಕಾಸವಾಗುತ್ತಿತ್ತು. ಇಂದು ಘನೀಭೂತವಾಗಿದೆ. ಅದರ ದುರ್ಗಂಧದಿಂದ ಭಾರತದ ವಾತಾವರಣವೆಲ್ಲ ತುಂಬಿದೆ. ಶೂದ್ರವರ್ಗ ತನ್ನ ಊಳಿಗ ಸ್ವಭಾವವನ್ನು ಬಿಟ್ಟು ಹೊರಬರಬೇಕೆಂದು ವಿವೇಕಾನಂದರು ಕರೆ ನೀಡುತ್ತಾರೆ. ಶೂದ್ರರು ತಮ್ಮ ಶೂದ್ರತ್ವದ ಶಕ್ತಿಯಿಂದಲೇ ಮೇಲೇಳುವ ಕಾಲ ಬರುತ್ತದೆ ಎಂದು ಭಾವಿಸುತ್ತಾರೆ.

ಉತ್ತರ 17:
ಹನ್ನೆರಡು ವರ್ಷದ ಬಾಲಕ ಶಾಲೆಗೆ ಹೋಗದೆ ಅಮೃತಸರದ ಜಲಿಯನ್ ವಾಲಾಬಾಗ್‌ಗೆ ಹೋಗಿ ಅಂತರ್ಮುಖಿಯಾಗಿ ನಿಂತು, ನಂತರ ಅಲ್ಲಿದ್ದ ಮಣ್ಣನ್ನು ಹಣೆಗಿಟ್ಟುಕೊಂಡು, ಇನ್ನಷ್ಟನ್ನು ಡಬ್ಬಿಯಲ್ಲಿ ಶೇಖರಿಸಿಕೊಂಡು ರಾತ್ರಿ ಮನೆಗೆ ಹಿಂದಿರುಗಿದಾಗ, ಎಂದಿನಂತೆ ಸಹೋದರಿ ಊಟಕ್ಕೆ ಎಬ್ಬಿಸುತ್ತಾಳೆ. ಪ್ರಿಯವಾದ ಮಾವಿನ ಹಣ್ಣನ್ನು ನೀಡಿದರೂ ಒಲ್ಲೆ ಎನ್ನುತ್ತಾನೆ. ಕಾರಣ ಕೇಳಿದಾಗ ಮನೆಯ ಹಿಂಬಾಗಕ್ಕೆ ಕರೆದೊಯ್ದು ರಕ್ತಸಿಕ್ತವಾದ ಮಣ್ಣನ್ನು ತೋರಿಸುತ್ತಾನೆ. ಅದು ಎಲ್ಲಿಯದೆಂದು ತಿಳಿದಾಗ ಭಗತ್‌ಸಿಂಗ್‌ನ ಉಪವಾಸಕ್ಕೆ ಕಾರಣ ತಿಳಿಯುತ್ತದೆ.

ಉತ್ತರ 18:
ಮೃಗದ ಒರಟು ಮಾತು, ತಿಕ್ಕಲು ನಡವಳಿಕೆ ಮನಸಿನಲ್ಲಿ ನಗು ತರುತ್ತಿದ್ದವು. ಎಂದೂ ತನ್ನ ವಚನ ಮೀರಿರಲಿಲ್ಲ. ಮನ ನೋಯಿಸಿರಲಿಲ್ಲ. ತನ್ನನ್ನು ನೆಮ್ಮದಿಯಾಗಿಡುವುದೇ ಅದರ ಸುಖವಾಗಿತ್ತು. ಮುಖ, ಚಲನ-ವಲನ ನೆನಪಾಗುತ್ತಿತ್ತು. ಅರಮನೆಯ ಸುಖಕ್ಕಿಂತ ಮೃಗದ ವ್ಯಕ್ತಿತ್ವ ಆಕೆಯ ಮನಸ್ಸು – ತುಂಬಿತ್ತು. ಆತನ ಕಾಳಜಿಯನ್ನು ನೆನೆದು ಮೃಗದ ಬಗೆಗೆ ಸುಂದರಿಯ ಮನಸ್ಸು ಕರಗುತ್ತಿತ್ತು.

ಉತ್ತರ 19:
ಬದಿನಲ್ಲಿ ಹುಟ್ಟೋದು ಬದಿನಲ್ಲಿ ಬೆಳೆಯೋದು ಹೋಗೋರ ಮುಂಜೆರಗ ಹಿಡಿಯೋದು ಎಲೆಬಾಲೆ ಬಾರೆ ಇದರರ್ಥ ಒಡೆದ್ದೇಳೆ ಸಂದರ್ಭವನ್ನು – ಸ್ವಾರಸ್ಯದೊಂದಿಗೆ ವಿವರಿಸಿ.

III.
ಉತ್ತರ 20:
ಆಯ್ಕೆ : ಪ್ರಸ್ತುತ ಹೇಳಿಕೆಯನ್ನು ವಿ. ಕೃ. ಗೋಕಾಕರು ಬರೆದ ಸಮುದ್ರದಾಚೆಯಿಂದ ಎಂಬ ಪ್ರವಾಸಕಥನದಿಂದ ಆಯ್ದ ಲಂಡನ್ ನಗರ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ : ಲಂಡನ್ ನಗರದ ಪ್ರವಾಸದ ಅನುಭವಗಳನ್ನು ಲೇಖಕರು ದಾಖಲಿಸುತ್ತ ತಮ್ಮ ಅನುಭವಗಳನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಬೇಕನ್ ಹೇಳಿದ ಮಾತನ್ನು ಸ್ಮರಿಸುತ್ತಾರೆ. ಕಡಿಮೆ ದಿನಗಳಲ್ಲಿ ಮನಸ್ಸು ವಿಕಾಸಗೊಂಡಿದೆ, ದೃಷ್ಟಿ ವಿಶಾಲವಾಗಿದೆ, ಸಂಸ್ಕೃತಿ ಒರೆಗಲ್ಲಿನ ಮೇಲೆ ನಿಂತಿದೆ ಎಂದು ನೆನಸುತ್ತ ಬೇಕನ್ ಹೇಳಿದ ಮಾತನ್ನು ನೆನಪಿಸಿಕೊಳ್ಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.

ಸ್ವಾರಸ್ಯ : ದೇಶ ಸುತ್ತು ಕೋಶ ಓದು ಎಂಬ ಗಾದೆಯನ್ನು ಇದು ಅರ್ಥೈಸುತ್ತದೆ. ದೇಶ-ವಿದೇಶಗಳ ಪ್ರವಾಸದ ಅನುಭವವು ಜ್ಞಾನಾಭಿವೃದ್ಧಿಗೆ ಸಹಕಾರಿ ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ.

ಉತ್ತರ 21:
ಆಯ್ಕೆ : ಪ್ರಸ್ತುತ ಹೇಳಿಕೆಯನ್ನು ಎ.ಎನ್. ಮೂರ್ತಿರಾವ್ ಅವರು ಬರೆದಿರುವ ಸಮಗ್ರ ಲಲಿತ ಪ್ರಬಂಧಗಳು ಸಂಕಲನದಿಂದ ಆರಿಸಿರುವ ವ್ಯಾಘ್ರಗೀತೆ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ: ಹುಲಿಯಿಂದ ತಪ್ಪಿಸಿಕೊಳ್ಳಲು ಕುಲಾಲ ಚಕ್ರದಂತೆ ತಿರುಗಿ ತಿರುಗಿ ಶಾನುಭೋಗರಿಗೆ ಆಯಾಸವಾಗಿತ್ತು. ಮಡಿಯಬೇಕಾದರೆ ಮಾಡಿಯೇ ಮಡಿಯಬೇಕೆಂದು ಕೈಯಲ್ಲಿದ್ದ ಬ್ರಹ್ಮಾಸ್ತವಾದ ಖಿರ್ದಿ ಪುಸ್ತಕವನ್ನು ಹುಲಿಯೆಡೆಗೆ ಎಸೆದು ಅದರ ಗಮನ ಬೇರೆಡೆಗೆ ಸೆಳೆದು ಮರವೇರಿ ಬಿಡಬಹುದೆಂದು ತಿಳಿದು ಖಿರ್ದಿ ಪುಸ್ತಕವನ್ನು ಹುಲಿಯೆಡೆಗೆ ಎಸೆದು ಮೇಲಿನಂತೆ ಹೇಳುತ್ತ ಒಂದೇ ಉಸಿರಿನಲ್ಲಿ ಮರದ ಕಡೆಗೆ ಧಾವಿಸುವ ಸಂದರ್ಭದಲ್ಲಿ ಶಾನುಭೋಗರು ಮೇಲಿನಂತೆ ದೇವರಲ್ಲಿ ಪ್ರಾರ್ಥಿಸಿದರು.

ಸ್ವಾರಸ್ಯ : ಸಂಕಟ ಬಂದಾಗ ವೆಂಕಟರಮಣ ಎಂಬ ಮಾತಿನಂತೆ, ಅಪಾಯಬಂದಾಗ ಉಪಾಯ ಹುಡುಕುವ ಗುಣವನ್ನು ಕಾಣಬಹುದು.

ಉತ್ತರ 22:
ಆಯ್ಕೆ : ಪ್ರಸ್ತುತ ಹೇಳಿಕೆಯನ್ನು ಕವಿ ದ. ರಾ. ಬೇಂದ್ರೆಯವರು ಬರೆದಿರುವ ಗರಿ ಕವನಸಂಕಲನದಿಂದ ಆರಿಸಿರುವ ಹಕ್ಕಿ ಹಾರುತಿದೆ ನೋಡಿದಿರಾ ಎಂಬ ಕವಿತೆಯಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ : ಕಾಲದ ಸುಳಿಯಲ್ಲಿ ಎಲ್ಲರೂ ಸಮಾನರು. ನಿಸರ್ಗದತ್ತವಾದ ಕಾಲಚಕ್ರದಲ್ಲಿ ಎಂತಹ ಪ್ರಭಾವಶಾಲಿಯಾದರೂ ತಲೆಬಾಗಲೇಬೇಕು. ಪ್ರತಿಯೊಂದು ಘಟನೆಯೂ ಕಾಲ ಉರುಳಿದಂತೆ ಇತಿಹಾಸವಾಗುತ್ತ ಹೋಗುತ್ತದೆ. ಬ್ರಿಟಿಷರ ಸಾಮಾಜ್ಯಶಾಹಿ ಆಡಳಿತ ಅನೇಕ ಕೋಟೆ ಕೊತ್ತಲಗಳನ್ನು ತೇಲಿಸಿ, ಮುಳುಗಿಸುವಂತೆ ಮಾಡಿತು. ಎಂತಹ ಸಾರ್ವಭೌಮರನ್ನು ಸಹ ಕಾಲ ಬಿಡಲಿಲ್ಲ ಎಂಬುದನ್ನು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಕವಿ ಹೇಳಿದ್ದಾರೆ.

ಸ್ವಾರಸ್ಯ : ಚಲನಶೀಲವಾದ ಕಾಲಕ್ಕೆ ಎಲ್ಲರೂ ತಲೆಬಾಗಲೇಬೇಕು. ಕಾಲದ ಸುಳಿಯಲ್ಲಿ ಸಿಲುಕದೆ ಇರುವ ವ್ಯಕ್ತಿ ಯಾರೊಬ್ಬರೂ ಇಲ್ಲ ಎಂಬುದನ್ನು ಧ್ವನಿಸುತ್ತದೆ.

ಉತ್ತರ 23:
ಆಯ್ಕೆ : ಪ್ರಸ್ತುತ ಹೇಳಿಕೆಯನ್ನು ಕುವೆಂಪು ಅವರು ರಚಿಸಿರುವ ಪಕ್ಷಿಕಾಶಿ ಕವನ ಸಂಕಲನದಿಂದ ಆರಿಸಿರುವ ಹಸುರು ಎಂಬ ಕವನದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ : ಆಶ್ವಯುಜ ಮಾಸದ ನವರಾತ್ರಿಯ ಸೌಂದರ್ಯವನ್ನು ನೋಡಿ, ಎಲ್ಲಿ ನೋಡಿದರಲ್ಲಿ ಹಸುರು ತುಂಬಿದೆ. ಇಡೀ ಭೂಮಿಗೆ ಹಚ್ಚಹಸುರು ಬಣ್ಣದ ಮಕಮಲ್ಲಿನ ಜಮಖಾನೆಯನ್ನು ಹಾಸಿ ಮುಚ್ಚಿದಂತೆ ತೋರುತ್ತಿದೆ. ಹಸಿರು ಬಣ್ಣವೊಂದನ್ನು ಬಿಟ್ಟು ಬೇರೆ ಯಾವ ಬಣ್ಣವೂ ಕಾಣುತ್ತಿಲ್ಲ ಎಂಬುದನ್ನು ಕವಿ ಕುವೆಂಪು ಈ ರೀತಿ ವ್ಯಕ್ತಪಡಿಸಿದ್ದಾರೆ.

ಸ್ವಾರಸ್ಯ : ಮಲೆನಾಡಿನ ಪ್ರಕೃತಿ ಸೌಂದರ್ಯ ಹಾಗೂ ಪ್ರಕೃತಿಯ ಹಸುರಿನಲ್ಲಿ ಕವಿ ಮನ ತಲ್ಲೀನರಾಗಿರುವುದು ಸ್ವಾರಸ್ಯಕರವಾಗಿ ಮೂಡಿ ಬಂದಿದೆ.

IV.
ಉತ್ತರ 24:
ಪು.ತಿ.ನ. ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಪುರೋಹಿತ ತಿರಿನಾರಾಯಣಯ್ಯಂಗಾರ ಅಯ್ಯಂಗಾರ್ ನರಸಿಂಹಾಚಾರ್ ರವರು 1905ರಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದರು. ಕನ್ನಡ ವಿಶ್ವಕೋಶದ ಭಾಷಾಂತರಕಾರರಾಗಿ, ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟು ಸಂಪಾದಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ಗೀತನಾಟಕ, ಕವಿತೆ, ಸಣ್ಣಕತೆ, ಪ್ರಬಂಧ, ವಿಚಾರಸಾಹಿತ್ಯ ಮೊದಲಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಇವರು ಅಹಿ, ಗೋಕುಲನಿರ್ಗಮನ, ಶಬರಿ, ವಿಕಟಕವಿ ವಿಜಯ, ಹಂಸದಮಯಂತಿ ಮತ್ತು ಇತರ ರೂಪಕಗಳು, ಹಣತೆ, ರಸಸರಸ್ವತಿ, ಗಣೇಶದರ್ಶನ, ಶಾರದಯಾಮಿನಿ, ಶ್ರೀ ಹರಿಚರಿತೆ, ರಥಸಪ್ತಮಿ ಎಂಬ ಕೃತಿಗಳನ್ನು ರಚಿಸಿದ್ದಾರೆ. ಹಂಸದಮಯಂತಿ ಮತ್ತು ಇತರ ರೂಪಕಗಳು ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶ್ರೀ ಹರಿಚರಿತೆ ಕಾವ್ಯಕ್ಕೆ ಪಂಪಪ್ರಶಸ್ತಿ ಲಭಿಸಿದೆ. ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ. ಚಿಕ್ಕಮಗಳೂರಿನಲ್ಲಿ 1981ರಲ್ಲಿ ನಡೆದ 53ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಉತ್ತರ 25:
ಆದಿ ಕವಿ ಎಂದೇ ಹೆಸರಾದ ಪಂಪ ಕ್ರಿ.ಶ. 941ರಲ್ಲಿ ವೆಂಗಿ ಮಂಡಲದ ವೆಂಗಿಪಳು ಎಂಬ ಅಗ್ರಹಾರದಲ್ಲಿ ಜನಿಸಿದರು. ಕೃಷ್ಣಾ ಮತ್ತು ಗೋದಾವರಿ ನದಿಗಳ ನಡುವಿನ ಸ್ಥಳವಾದ ವೆಂಗಿಪಳು ನಿಸರ್ಗ ಸೌಂದರ್ಯದ ತಾಣ. ಚಾಲುಕ್ಯರ ಅರಿಕೇಸರಿಯ ಆಸ್ಥಾನ ಕವಿಯಾಗಿದ್ದ ಈತ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯಂ ಎಂಬ ಮಹಾಕಾವ್ಯಗಳನ್ನು ರಚಿಸಿದ್ದಾನೆ. ವಿಕ್ರಮಾರ್ಜುನ ವಿಜಯಕ್ಕೆ ಪಂಪಭಾರತ ಎಂಬ ಮತ್ತೊಂದು ಹೆಸರಿದೆ. – ವೇದವ್ಯಾಸರ ಮಹಾಭಾರತವನ್ನು ಆಧರಿಸಿ ಬರೆದ ಈ ಕೃತಿಯಲ್ಲಿ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿದ್ದಾನೆ. ಇದೊಂದು ಲೌಕಿಕ ಕಾವ್ಯವೆಂದು ಘೋಷಿಸಿದ್ದಾನೆ. ಕವಿಯೂ, ಕಲಿಯೂ ಆಗಿದ್ದ ಪಂಪ ರತ್ನತ್ರಯರಲ್ಲಿ ಒಬ್ಬ. ಸರಸ್ವತೀಮಣಿಹಾರ, ಸಂಸಾರ ಸಾರೋದಯ , ಕವಿತಾಗುಣಾರ್ಣವ ಎಂಬ ಬಿರುದುಗಳನ್ನು ಪಡೆದಿದ್ದ ಪ್ರಸಿದ್ಧ ಕವಿ ಎಂದರೆ ಪಂಪ.

V
ಉತ್ತರ 26:
Karnataka Board SSLC Kannada Question Paper March 2018 2

ಉತ್ತರ 27:
ಈ ಪದ್ಯಸಾಲುಗಳನ್ನು ಜಿ.ಎಸ್. ಶಿವರುದ್ರಪ್ಪನವರು ಬರೆದಿರುವ ಎದೆತುಂಬಿಹಾಡುವೆನು ಕವನ ಸಂಕಲನದಿಂದ ಆರಿಸಿರುವ ಸಂಕಲ್ಪಗೀತೆ ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ. ಈ ಕವನದಲ್ಲಿ ಕವಿ ದೃಢಸಂಕಲ್ಪದಿಂದ ಹೇಗೆ ಯಶಸ್ಸುಗಳಿಸಬಹುದು ಎಂಬುದನ್ನು ಹೇಳಿದ್ದಾರೆ. ಜೀವನದಲ್ಲಿ ಧನಾತ್ಮಕ ಭಾವನೆಯನ್ನು ಹೊಂದಿರಬೇಕು. ಯಾವುದೇ ರೀತಿಯ ಸವಾಲುಗಳು ಎದುರಾದರೂ ದೃಢಸಂಕಲ್ಪ, ಆತ್ಮವಿಶ್ವಾಸದಿಂದ ಕ್ರಿಯಾಶೀಲರಾದಾಗ ಯಶಸ್ಸು ಸಿಗುತ್ತದೆ. ಜೀವನದಲ್ಲಿ ಮನುಷ್ಯ ಬೇರೆ ಬೇರೆ ಜಾತಿ, ಮತಗಳಲ್ಲಿ ಮುಳುಗಿ ಹೋಗಿದ್ದಾನೆ. ಅವರಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಯ ಭರವಸೆಯನ್ನು ಬಿತ್ತಬೇಕು. ಮನುಷ್ಯ ಮನುಷ್ಯರ ನಡುವೆ ಕಂದಕವನ್ನು ಸೃಷ್ಟಿಸಿರುವ ಜಾತಿ ಎಂಬ ಗೋಡೆಯನ್ನು ಕೆಡವಿ ಎಲ್ಲರನ್ನೂ ಒಗ್ಗೂಡಿಸುವ ಸೇತುವೆಯನ್ನು ನಿರ್ಮಿಸಬೇಕು. ಭೇದಭಾವವನ್ನು ಹೋಗಲಾಡಿಸಿ ಐಕ್ಯದಿಂದ ಪ್ರಯತ್ನಶೀಲರಾದಾಗ ಬಲವೃದ್ಧಿಸುತ್ತದೆ. ‘ವಸುದೈವ ಕುಟುಂಬಕಂ’ ಎಂಬಂತೆ ಇಡೀ ವಿಶ್ವವೇ ಕುಟುಂಬವಾಗಬೇಕು. ಆಗ ಅಸಾಧ್ಯವಾದುದು ಯಾವುದೂ ಇಲ್ಲ ಎಂಬಂತೆ ಯಶಸ್ಸನ್ನು ಸಾಧಿಸಬಹುದು. ಪಂಪ ಮಹಾಕವಿ ಹೇಳಿದಂತೆ ಮಾನವಕುಲ ತಾನೊಂದೆ ವಲಂ ಮನುಷ್ಯಕುಲವೊಂದೇ ಶ್ರೇಷ್ಟವಾದುದು. ಆದ್ದರಿಂದ ನಮ್ಮಲ್ಲಿರುವ ಭೇದ-ಭಾವ ಎಂಬ ಸಂಕುಚಿತ ಮನೋಭಾವವನ್ನು ದೂರಮಾಡಿ ಎಲ್ಲರೂ ಐಕ್ಯತೆಯಿಂದ ಬಾಳಬೇಕೆಂಬುವ ದೃಢಸಂಕಲ್ಪವನ್ನು ಕೈಗೊಳ್ಳಬೇಕೆಂಬುದೇ ಪ್ರಸ್ತುತ ಪದ್ಯಭಾಗದ ಮೌಲ್ಯವಾಗಿದೆ.

VI.
ಉತ್ತರ 28:
ನಾಲ್ವಡಿ ಕೃಷ್ಣರಾಜ ಒಡೆಯರು 1902 ಆಗಸ್ಟ್ 8 ರಿಂದ ಮೈಸೂರು ರಾಜ್ಯದ ನೇರ ಉಸ್ತುವಾರಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು, ದಿವಾನರಾಗಿದ್ದ ಸರ್.ಕೆ.ಶೇಷಾದ್ರಿಯವರ ಸಹಕಾರದಿಂದ ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ದರಾದರು.ಅರಸುಮನೆತನದಿಂದ ಬಂದವರಾದರೂ, ಜನತೆ ಆಡಳಿತದಲ್ಲಿ ಪಾಲ್ಗೊಳ್ಳುವುದರ ಪರವಾಗಿದ್ದರು.ಪ್ರಜಾಪ್ರತಿನಿಧಿಸಭೆ ಹೊಸರೂಪ ಪಡೆಯಿತು. 1923 ರಲ್ಲಿ ಕಾನೂನೊಂದನ್ನು ಜಾರಿಗೆ ತಂದು ಪ್ರಜಾಪ್ರತಿನಿಧಿ ಸಭೆಯನ್ನು ಶಾಸನಬದ್ದ ಸಂಸ್ಥೆ ಯನ್ನಾಗಿಸಿದರು.ವರ್ಷಕ್ಕೆ ಎರಡು ಬಾರಿ ಸಮಾವೇಶಗೊಂಡುಕಲಾಪ ನಡೆಸಿ ವಾರ್ಷಿಕ ಆಯವ್ಯಯ, ಪರಿಶೀಲನೆ, ಪ್ರಶೋತ್ತರ ಠರಾವು ಮಂಡಿಸಲಾಗುತ್ತಿತ್ತು. ಹೆಚ್ಚಿನ ಸದಸ್ಯರು ಜನರಿಂದಲೇ ಆಯ್ಕೆಯಾಗುತ್ತಿದ್ದರು. 1907 ರಲ್ಲಿ ನ್ಯಾಯ’ ವಿಧಾಯಕ ಸಭೆ ಸ್ಥಾಪಿಸಿದರು. ಇದು ಮೇಲ್ಪನೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು.ಬೆಂಗಳೂರಿನಲ್ಲಿ ಎರಡು ಬಾರಿ ಸಮಾವೇಶಗೊಂಡು ಪ್ರಜಾಪ್ರತಿನಿಧಿ ಸಭೆಯಲ್ಲಿ ಮಂಡಿಸಿದ ಎಲ್ಲವನ್ನು ವಿಮರ್ಶಿಸುವ ಕಾನೂನನ್ನು ಜಾರಿಗೆ ತರುವ ಅಧಿಕಾರ ಇದ್ದಿತು. ಗ್ರಾಮ ನಿರ್ಮಲೀಕರಣ, ವೈದ್ಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಂ ಆಡಳಿತ ಕೇತಗಳಾದವು. ಶಿವನಸಮುದ್ರದ ಬಳಿ ಕಾವೇರಿ ನದಿಯಿಂದ ಜಲವಿದ್ಯುತ್ ಉತ್ಪಾದನಾ ಕೇಂದ್ರ ವಾಣಿವಿಲಾಸ ಸಾಗರ, ಕೃಷ್ಣಸಾಗರ ಜಲಾಶಯಗಳನ್ನು ನಿರ್ಮಿಸಿದರು. ಉಚಿತ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಜಾರಿಗೆ ತಂದರು. ಮೈಸೂರು ವಿಶ್ವವಿದ್ಯಾಲಯ, ಉಚಿತ ಆಸ್ಪತ್ರೆ ಮೈಸೂರು ಬ್ಯಾಂಕ್ ಸಹಕಾರ ಸಂಘಗಳನ್ನು ಸ್ಥಾಪಿಸಿದರು. ಹಲವಾರು ಸಾಮಾಜಿಕ ಕಾನೂನುಗಳನ್ನು ಜಾರಿಗೆ ತಂದರು. ಭರತಖಂಡದಲ್ಲಿ ಯಾವ ಸಂಸ್ಥಾನವೂ ಕಾಣದ ಅಭಿವೃದ್ಧಿಯನ್ನು ಮಾಡಿ ಮೈಸೂರು ಸಂಸ್ಥಾನವನ್ನು ಮಾದರಿ ಮೈಸೂರು ರಾಜ್ಯವನ್ನಾಗಿ ರೂಪಿಸಿ ಸಾಮಾಜಿಕ ಕಾನೂನುಗಳ ಹರಿಕಾರ ಎಂಬ ಕೀರ್ತಿಗೆ ಪಾತ್ರರಾದರು.
ಅಥವಾ
ಆಧುನಿಕ ಶಿಕ್ಷಣವೇ ಎಲ್ಲಾ ಸಮಸ್ಯೆಗಳಿಗೂ ಪರಮೋಚ್ಚ ಪರಿಹಾರ ಎಂದು ವಿಶ್ವೇಶ್ವರಯ್ಯನವರು ನಂಬಿದ್ದರು. ಶಿಕ್ಷಣವೇ ಸಂಜೀವಿನಿ ಎಂಬುದನ್ನು ಅರಿತು ಶಿಕ್ಷಣದ ವಿವಿಧ ಯೋಜನೆಗಳನ್ನು ರೂಪಿಸಿದರು. 1913 ರಲ್ಲಿ ಪ್ರಾಥಮಿಕ ಶಿಕ್ಷಣನಿಬಂಧನೆಯನ್ನು ಜಾರಿಗೆ ತಂದರು.ಮದ್ರಾಸ್ ವಿಶ್ವವಿದ್ಯಾನಿಲಯದ ನಿಯಂತ್ರಣದಲ್ಲಿದ್ದ ಪ್ರೌಢಶಿಕ್ಷಣ ಶಾಲೆಗಳನ್ನು ಬದಲಿಸಿ, ಮೈಸೂರು ಸಂಸ್ಥಾನವೇ ಪ್ರತ್ಯೇಕವಾಗಿ ಪ್ರೌಢಶಿಕ್ಷಣದ ಅಂತಿಮ ಪರೀಕ್ಷೆ ನಡೆಸುವ ಯೋಜನೆಯನ್ನು ಆರ್ಥಿಕ ಪರಿಷತ್ತಿನ ಮೂಲಕ ರೂಪುಗೊಳಿಸಿದರು. ಇವರ ಕಾಲದಲ್ಲಿಯೇ ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆಯಾಯಿತು. ಶಿಕ್ಷಾಣಕ್ಕಾಗಿ ಶಿಕ್ಷಣವಿರಬೇಕು.ಅದು ಕೆಲವೇ ಜನರ ಸ್ವತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು ಎಂಬುದನ್ನು ಅರಿತಿದ್ದ ಇವರು ತಾಂತ್ರಿಕ ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಬೆಂಗಳೂರಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಶಾಲೆ, ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆ ಸ್ಥಾಪಿಸಿದರು. ಏಕೀಕೃತ ಕರ್ನಾಟಕದ ರಚನೆ ಹಾಗೂ ಕನ್ನಡ ಭಾಷೆ ಸಾಹಿತ್ಯಗಳ ಮೇಲೆ ಜನರಿಗಿದ್ದ ಒಲವನ್ನು ಮನಗಂಡು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ್ದು ವಿಶ್ವೇಶ್ವರಯ್ಯ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗೆ ಕೈಗನ್ನಡಿಯಾಗಿದೆ.

ಉತ್ತರ 29:
ದುರ್ಯೋಧನ ಪಾಂಡವರನ್ನು ದೂತದಲ್ಲಿ ಸೋಲಿಸುತ್ತಾನೆ. ಪಣದಂತೆ 12 ವರ್ಷ ವನವಾಸ ಒಂದು ವರ್ಷ ಅಜ್ಞಾತವಾಸ ಮುಗಿಸಿ ಬಂದಪಾಂಡವರು ತಮ್ಮ ಪಾಲಿನ ರಾಜ್ಯವನ್ನು ಕೇಳಿದಾಗ ದುರ್ಯೋಧನ ಕೊಡಲು ನಿರಾಕರಿಸುತ್ತಾನೆ. ಸಂಧಾನದ ಮೂಲಕ ರಾಜ್ಯವನ್ನು ಮರಳಿ ಪಡೆಯಲು ಧರ್ಮರಾಯ ಕೃಷ್ಣನನ್ನು ಕಳುಹಿಸುತ್ತಾನೆ. ಸಂಧಿ ಮುರಿದು ಬಿದ್ದು ಯುದ್ದವೇ ಸಿದ್ದ ಎಂದು ತೀರ್ಮಾನವಾದಾಗ, ಕೌರವರ ಸೇನೆಯಲ್ಲಿದ್ದ ಕರ್ಣನೇ ಪಾಂಡವರಿಗೆ ಪ್ರಬಲ ಎದುರಾಳಿ ಆತನಿಂದ ಪಾಂಡವರನ್ನು ರಕ್ಷಿಸಬೇಕೆಂದು ಬಗೆದು ಕರ್ಣನಿಗೆ ಆತನ ಜನ್ಮರಹಸ್ಯವನ್ನು ತಿಳಿಸುತ್ತಾನೆ. ಪಾಂಡವರ ಹಿರಿಯ ನೀನೇನಿನ್ನನ್ನು ಹಸ್ತಿನಾಪುರದ ರಾಜನನ್ನಾಗಿ ಮಾಡುತ್ತೇನೆ ಎಂಬ ಆಮಿಷ ಒಡ್ಡುತ್ತಾನೆ. ತನ್ನ ಜನ್ಮರಹಸ್ಯ ತಿಳಿದು ಕರ್ಣನು ಕುತ್ತಿಗೆಯ ನರಗಳು ಬಿಗಿದು, ಕಣ್ಣೀರು ಸುರಿಸುತ್ತಾನೆ. ಕೌರವನಿಗೆ ಕೇಡಾಗುತ್ತದೆ. ಕೃಷ್ಣನ ಹಗೆ ಹೊಗೆದೋರದೆ ಸುಡದೆ ಬಿಡುವುದಿಲ್ಲ ಎಂದು ಚಿಂತಿತನಾಗುತ್ತಾನೆ.ಕೆಲಕಾಲ ಸುಮ್ಮನಿದ್ದ ಕರ್ಣನನ್ನು ಕುರಿತು ಕೃಷ್ಣ ಹೀಗೆ ಹೇಳುತ್ತಾನೆ. ಪಾಂಡವರಿಂದ ಸೇವೆಮಾಡಿಸಿಕೊಳ್ಳಲು ಮನಸ್ಸಿಲ್ಲವೆ ? ನಾನು ನಿನಗೆ ಕೇಡು ಬಗೆಯುತ್ತಿಲ್ಲ. ಎಂದಾಗ ಕರ್ಣನು ಕೃಷ್ಣ ಈ ಭೂಮಿಗೆ ರಾಜ್ಯಕ್ಕೆ ಮನಸೋಲುವವನಲ್ಲ, ಕೌರವರಿಂದ ಪಾಂಡವರಿಂದ ಸೇವೆ ಮಾಡಿಸಿಕೊಳ್ಳಲು ಇಷ್ಟವಿಲ್ಲ. ನನ್ನನ್ನು ಕಾಪಾಡಿದ ಒಡೆಯನಿಗೆ ಶತ್ರುಗಳ ತಲೆಗಳನ್ನು ಕಡಿದು ಒಪ್ಪಿಸುವ ಅವಸರದಲ್ಲಿದ್ದೆ. ಅದಕ್ಕೂ ಮೊದಲೇ ಕೌರವನನ್ನು ಕೊಂದುಬಿಟ್ಟೆ. ಯಾರು ಏನು ಹೇಳಿದರೂ ಕೌರವನೇ ನನಗೆ ಎಲ್ಲ. ನಾಳೆ ನಡೆಯುವ ಮಹಾಭಾರತ ಯುದ್ಧದಲ್ಲಿ ದುರ್ಯೋಧನನ ಋಣ ತೀರುವಂತೆ ಹೋರಾಡುತ್ತೇನೆ. ಅವನಿಗಾಗಿ ಶರೀರವನ್ನು ಅರ್ಪಿಸುತ್ತೇನೆ. ನಿನ್ನವರಾದ ಪಾಂಡವರನ್ನು ನೋಯಿಸುವುದಿಲ್ಲ ಎನ್ನುತ್ತಾನೆ. ಸ್ವಾಮಿನಿಷ್ಠೆಗೆ ಬದ್ದನಾದ ಕರ್ಣ ಪ್ರಲೋಭನೆಗೆ ಬಲಿಯಾಗದೆ ಅಸಹಾಯಕನಾಗಿ, ಸಂಕಟದಿಂದ ಬಳಲುತ್ತಾನೆ. ಕರ್ಣನ ಹಿರಿಮೆ ಗರಿಮೆ ವ್ಯಕ್ತವಾಗಿದೆ.
ಅಥವಾ
ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಸಾಮರಸ್ಯದ ಬದುಕು ಅತ್ಯಗತ್ಯ. ಛಲ, ಮತ್ಸರ ಪ್ರಧಾನವಾದರೆ ಸಂಘರ್ಷ ಅನಿವಾರ್ಯವಾಗುತ್ತದೆ. ಶತ್ರುವಿನೊಡನೆ ಸಮರಕ್ಕಿಳಿದು ಕಾದಾಡುವ ಮುನ್ನ ಶತ್ರುಬಲದ ವಿವಿಧ ಆಯಾಮಗಳನ್ನು ಶಮನಗೊಳಿಸಿದಾಗ ಗೆಲುವು ಸಾಧ್ಯ ಎಂಬುದು ರಾಜತಂತ್ರ ಕೌರವರೊಂದಿಗೆ ಸಂಧಿ ಮುರಿದು ಬಿದ್ದು ಯುದ್ಧವೇ ಸಿದ್ಧ ಎಂದು ತೀರ್ಮಾನವಾದಾಗ ಕೃಷ್ಣನು ಕರ್ಣನನ್ನು ಕರೆದು ಮೈದುನತನದ ಸರಸವನ್ನು ಎಸಗಿ ತನ್ನ ರಥದಲ್ಲಿ ತೊಡೆಗೆ ತೊಡೆತಾಗುವಂತೆ ಕೂರಿಸಿಕೊಂಡು ಕರ್ಣನ ಜನ್ಮರಹಸ್ಯವನ್ನು ಹೇಳುತ್ತಾನೆ. ನಿಮ್ಮಲ್ಲಿ ಯಾದವರು, ಕೌರವರು ಎಂಬ ಭೇದವಿಲ್ಲ. ಈ ಭೂಮಿಗೆ ನಿಜವಾಗಿ ನೀನೇ ಒಡೆಯನಾಗಬೇಕು. ಕುಂತಿ ಪಡೆದ ಐದುಮಂತ್ರಗಳಲ್ಲಿ ನೀನೆ ಮೊದಲಿಗ, ಎರಡನೆಯವನು ಯುಧಿಷ್ಠಿರ, ಮೂರನೆಯವನು ಕಲಿಭೀಮ, ನಾಲ್ಕನೆಯವನು ಅರ್ಜುನ, ಕೊನೆಯ ಐದನೆಯ ಮಂತ್ರದಲ್ಲಿ ಮಾದ್ರಿಗೆ ನಕುಲ-ಸಹದೇವರು ಜನಿಸಿದರು. ನಿನ್ನನ್ನು ಹಸ್ತಿನಾಪುರದ ರಾಜನನ್ನಾಗಿ ಮಾಡುತ್ತೇನೆ, ಕೌರವರು ಪಾಂಡವರು ನಿನ್ನ ಸೇವಕರಾಗುತ್ತಾರೆ. ಇದನ್ನು ಬಿಟ್ಟು ದುರ್ಯೋಧನನ ಎಂಜಲಿಗೆ ಕೈಚಾಚುವುದು ಸರಿಯೆ? ಎಡಭಾಗದಲ್ಲಿ ಕೌರವರು, ಬಲಭಾಗದಲ್ಲಿ ಪಾಂಡವರು, ನಡುವಿನಲ್ಲಿ ಮಾದ್ರರು, ಮಾಗಧರು, ಯಾದವರು ಇರುತ್ತಾರೆ. ಇವರ ನಡುವೆ ರಾಜನಾಗಿ ವಿಜೃಂಭಿಸುವುದನ್ನು ಬಿಟ್ಟು ದುರ್ಯೊಧನ ಕರೆದಾಗ ಸೇವಕನಂತೆ ಸ್ವಾಮಿ ನಿಮ್ಮ ಪ್ರಸಾದ ಎನ್ನುವುದು ಕಷ್ಟವಾಗುವುದಿಲ್ಲವೆ ? ಆದ್ದರಿಂದ ಪಾಂಡವರ ಪಕ್ಷವನ್ನು ಸೇರುವಂತೆ ಕೃಷ್ಣನು ಆಮಿಷಗಳನ್ನು ಒಡ್ಡುತ್ತಾನೆ.
ಗಾದೆಗಳು
ನಗರದ ಉದ್ಯಾನಗಳಲ್ಲಿ ಗಿಡಗಳನ್ನು ಪಕ್ಷಿ, ಪ್ರಾಣಿಗಳ ಅಥವಾ ವಿವಿಧ ವಸ್ತುಗಳ ಆಕಾರಗಳಲ್ಲಿ ಬೆಳೆಸಿರುವುದನ್ನು ನೋಡಿರಬಹುದು. ಇದು ಸಾಧ್ಯವಾಗುವುದು ಅವು ಇನ್ನೂ ಎಳೆಯಾಗಿರುವಾಗಲೆ ಅವುಗಳನ್ನು ಬೇಕಾದ ಆಕಾರಕ್ಕೆ ಬಗ್ಗಿಸಿ ಬೆಳೆಸಿದ್ದರಿಂದ ಗಿಡಗಳು ಬಲಿತ ಮೇಲೆ ಹೀಗೆ ಬಗ್ಗಿಸುವುದು ಸಾಧ್ಯವಿಲ್ಲ. ಹೆಚ್ಚು ಬಲ ಪ್ರಯೋಗದಿಂದ ಬಗ್ಗಿಸಲು ಪ್ರಯತ್ನಿಸಿದರೆ ಕೊಂಬೆಗಳು ಮುರಿದೇ ಹೋಗುತ್ತವೆ. ಈ ಸಂಗತಿಯನ್ನು ಮನುಷ್ಯ ಪ್ರಪಂಚಕ್ಕೂ ಅನ್ವಯಿಸಿ ನೋಡಿದ್ದರಿಂದ ಮೇಲಿನ ಗಾದೆ ಹುಟ್ಟಿಕೊಂಡಿದೆ. ಮಕ್ಕಳ ಮನಸ್ಸು ಎಳೆಯ ಗಿಡದಂತೆ ಮೃದುವಾಗಿರುತ್ತದೆ. ಆಗ ಉಚಿತ ಬೋಧನೆ, ಅಗತ್ಯ ಬಿದ್ದರೆ ಸ್ವಲ್ಪ ದಂಡನೆ, ಉತ್ತಮ ಆದರ್ಶಗಳ ಮೂಲಕ ಒಳ್ಳೆಯ ಗುಣಗಳು ಮೈಗೂಡುವಂತೆ ಮಾಡುವುದು ಸಾಧ್ಯ. ಅನುಕೂಲ ವಾತಾವರಣ, ಆದರ್ಶ ಶಿಕ್ಷಣ ದೊರೆತ ಮಕ್ಕಳು ಉತ್ತಮವೂ ದೃಢವೂ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾರೆ. ದೇಶದ ಗೌರವಸ್ಥೆ ಪ್ರಜೆಗಳೂ, ಸಮಾಜದ ಸಭ್ಯ ಸದಸ್ಯರೂ ಆಗಿದ್ದೂ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುತ್ತಾರೆ. ಆದರೆ, ಈಚೀಚೆಗೆ ಯುವಜನರಲ್ಲಿ ಕಾಣುತ್ತಿರುವ ಅಶಿಸ್ತು, ಸ್ವಾರ್ಥ, ದೌರ್ಜನ್ಯ, ಲೋಲುಪತೆ, ಅಸಭ್ಯ ವರ್ತನೆ ಇವುಗಳನ್ನು ಗಮನಿಸಿದಾಗ ಇವರಿಗೆ ಬಾಲ್ಯದಲ್ಲಿ ಉತ್ತಮವಾದ ಶಿಕ್ಷಣ ದೊರೆತಿರಲಾರದು. ಹೀಗೆ ಬೆಳೆದವರನ್ನು ತಿದ್ದುವುದು ಬಹಳ ಕಷ್ಟ. ಅಂತಹ ಸಂದರ್ಭದಲ್ಲಿ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ ? ಎಂಬ ಗಾದೆ ಮಾತನ್ನು ಬಳಸುತ್ತಾರೆ.

ಉತ್ತರ 30:
ಅ. ವ್ಯಾವಹಾರಿಕ ಎಂದರೆ ಜೀವದ ಭಾಷೆ. ಇದರಲ್ಲಿ ಜನರು ಮಾತನಾಡುತ್ತಾರೆ, ವ್ಯವಹರಿಸುತ್ತಾರೆ. ಉದಾಹರಣೆ ಕನ್ನಡ, ತುಳು, ಕೊಂಕಣಿ, ಉರ್ದು ಇತ್ಯಾದಿ. ಅಭಿವೃದ್ಧಿ ಹೊಂದಿ ಗ್ರಂಥ ರಚನೆಯಲ್ಲಿ ಬಳಸುವ ಭಾಷೆಯೇ ಗ್ರಾಂಥಿಕ ಭಾಷೆಗಳು ವ್ಯಾವಹಾರಿಕವಾಗಬೇಕಿಲ್ಲ ಹಾಗೆಯೇ ಎಲ್ಲಾ ವ್ಯಾವಹಾರಿಕ ಭಾಷೆಗಳು ಗ್ರಾಂಥಿಕವಾಗಬೇಕೆಂಬ ನಿಯಮವಿಲ್ಲ. ತುಳು ಒಂದು ಸುಂದರ ವ್ಯಾವಹಾರಿಕ ಭಾಷೆ. ಆದರೆ ಗ್ರಾಂಥಿಕ ಭಾಷೆಯಲ್ಲ. ದೇವಭಾಷೆ ಎನಿಸಿರುವ ಸಂಸ್ಕೃತ ಗ್ರಾಂಥಿಕ ಭಾಷೆಯಾಗಿದೆ. ಆ) ನವಶಿಲಾಯುಗದ ಮಾನವ ತನ್ನ ಸಂಚಾರಿ ಜೀವನವನ್ನು ತ್ಯಜಿಸಿ ಒಂದೆಡೆ ಬೀಡು ಬಿಟ್ಟು ಆಸ್ತಿ, ಮನೆ ಬದುಕು ಮೊದಲಾದ ಭಾವನೆಯನ್ನು ಹೊಂದಲು ಪ್ರಾರಂಭಿಸಿದಂದಿನಿಂದ ಆತನಿಗೆ ಲೆಕ್ಕವಿಡುವ ಅವಶ್ಯಕತೆ ಉಂಟಾಯಿತು. ಓದು ಬರಹ ಬಾರದೆ ಇದ್ದರೂ ತಾನು ಕೆಲಸಕ್ಕೆ ಹೋದ ದಿನಗಳನ್ನು ದಿನನಿತ್ಯ ಗೋಡೆಯ ಮೇಲೆ ಒಂದೊಂದು ಗೆರೆ ಎಳೆದು ಗುರುತಿಸಿ ಕೊನೆಯಲ್ಲಿ ಲೆಕ್ಕಹಾಕಿ ಸಂಬಳ ಪಡೆಯುತ್ತಾನೆ. ಇದನ್ನು ಲಿಪಿಯ ಉಗಮ ಕಾಲ ಎನ್ನುವರು.

I.
ಉತ್ತರ 31:
ಬಿ) ಮಹರ್ಷಿ

ಉತ್ತರ 32:
ಸಿ) ಆವರಣ

ಉತ್ತರ 33:
ಡಿ) ಮಿಶ್ರವಾಕ್ಯ

ಉತ್ತರ 34:
ಎ) ತದ್ಧಿತಾಂತಾವ್ಯಯ

ಉತ್ತರ 35:
ಸಿ) ಅಂಕಿತನಾಮ

ಉತ್ತರ 36:
ಬಿ) ಮಾಟ .

ಉತ್ತರ 37:
ಎ) ಸಂಪ್ರದಾನ

ಉತ್ತರ 38:
ಡಿ) ಸಾಕು

ಉತ್ತರ 39:
ಸಿ) ಬೇಹಾರಿ

ಉತ್ತರ 40:
ಡಿ) ನಿಷೇಧಾರ್ಥಕ

II.
ಉತ್ತರ 41:
ಹಿಂದೂಸ್ಥಾನಿ

ಉತ್ತರ 42:
ಬಹುವೀಹಿಸಮಾಸ

ಉತ್ತರ 43:
ಕುದುರೆ

ಉತ್ತರ 44:
ದ್ವಿರುಕ್ತಿ

ಉತ್ತರ 45:
Karnataka Board SSLC Kannada Question Paper March 2018 3

ಉತ್ತರ 46:
ಅಲಂಕಾರದ ಹೆಸರು : ದೃಷ್ಟಾಂತಾಲಂಕಾರ
ಲಕ್ಷಣ: ಎರಡು ಬೇರೆ ಬೇರೆ ವಾಕ್ಯಗಳಲ್ಲಿ ಅರ್ಥ ಸಾದೃಶ್ಯದಿಂದ ಬಿಂಬ-ಪ್ರತಿಬಿಂಬ ಭಾವವು ತೋರಿ ಬಂದರೆ ಅದು ದೃಷ್ಟಾಂತಾಲಂಕಾರ
ಸಮನ್ವಯ: ಉಪಮೇಯ : ಮಾತುಬಲ್ಲವನಿಗೆ ಜಗಳವಿಲ್ಲ (ಪ್ರತಿಬಿಂಬ)
ಉಪಮಾನ : ಊಟ ಬಲ್ಲವನಿಗೆ ರೋಗವಿಲ್ಲ (ಬಿಂಬ) ಇಲ್ಲಿ ಊಟಬಲ್ಲವನಿಗೆ ರೋಗವಿಲ್ಲ ಎಂಬ ಉಪಮಾನ ವಾಕ್ಯಕ್ಕೂ ಮಾತುಬಲ್ಲವನಿಗೆ ಜಗಳವಿಲ್ಲ ಎಂಬ ಉಪಮೇಯ ವಾಕ್ಯಕ್ಕೂ ಅರ್ಥ ಸಾದೃಶ್ಯದಿಂದ ಪರಸ್ಪರ ಬಿಂಬ ಪ್ರತಿಬಿಂಬ ಭಾವವು ಕಂಡುಬರುತ್ತಿರುವುದರಿಂದ ಈ ಮೇಲಿನ ಲಕ್ಷವು ದೃಷ್ಟಾಂತ ಅಲಂಕಾರವಾಗಿದೆ.
ಅಥವಾ
ಅಲಂಕಾರದ ಹೆಸರು : ಉಪಮಾಲಂಕಾರ
ಲಕ್ಷಣ: ಎರಡು ವಸ್ತುಗಳಿಗೆ ಇರುವ ಪರಸ್ಪರ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರ.
ಸಮನ್ವಯ: ಉಪಮೇಯ : ಗುಂಡು ಸುರಿಯುವುದು ಉಪಮಾನ: ಸಿಡಿಲು ಸಿಡಿಯುವುದು ಉಪಮಾವಾಚಕ: ಹಾಂಗ (ಅಂತೆ)
ಸಮಾನಧರ್ಮ: ತೀವ್ರತೆ (ಲುಪ್ತವಾಗಿದೆ) ಇಲ್ಲಿ ಉಪಮೇಯವಾದ ಗುಂಡು ಹಾರಿಸುವುದನ್ನು ಉಪಮಾನವಾದ ಸಿಡಿಲು ಸಿಡಿಯುವುದಕ್ಕೆ ಸಾದೃಶ್ಯವಿರುವಂತೆ ಹೋಲಿಸಲಾಗಿದೆ.

I
ಉತ್ತರ 47:
ಕೂಡಿ ಬಾಳಿದರೆ ಸ್ವರ್ಗ ಸುಖ : ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು ಇದಕ್ಕೆ ಪೂರಕವಾದ ಗಾದೆಯಾಗಿದೆ. ಸಾಗರದಲ್ಲಿನ ಒಂದು ಹನಿ ನೀರಿಗೂ ಸಾಗರದಷ್ಟೇ ಶಕ್ತಿಯಿದೆ. ಆದರೆ ಅದನ್ನು ಸಾಗರದಿಂದ ಬೇರ್ಪಡಿಸಿದಾಗ ಯಾವ ಶಕ್ತಿಯೂ ಇರುವುದಿಲ್ಲ. ಇದೇರೀತಿ ಸಾಮಾಜಿಕ ಬದುಕಿನಲ್ಲಿಯೂ ವ್ಯಕ್ತಿಗಳು ಒಟ್ಟಾಗಿ ನಡೆದರೆ ಎಲ್ಲವನ್ನೂ ಸಾಧಿಸಬಹುದು. ಮುದುಕನೊಬ್ಬ ಸಾಯುವ ವೇಳೆಯಲ್ಲಿ ಸದಾ ಜಗಳವಾಡುವ ತನ್ನ ನಾಲ್ಕು ಮಕ್ಕಳಿಗೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಚೆನ್ನಾಗಿ ತೋರಿಸಿಕೊಟ್ಟನು. ನಾಲ್ಕು ಜನರಿಗೆ ಎರಡೆರಡು ಕೋಲುಗಳನ್ನು ತರಲು ಹೇಳಿ ಒಂದೊಂದು ಮುರಿಯಲು ಹೇಳಿದನು. ಎಲ್ಲರೂ ಬಿಡಿಬಿಡಿಯಾಗಿ ಮುರಿದರು. ಉಳಿದ ನಾಲ್ಕು ಕೋಲುಗಳನ್ನು ದಾರದಿಂದ ಕಟ್ಟಿ ಒಬ್ಬೊಬ್ಬರಾಗಿ ಮುರಿಯಲು ಹೇಳಿದನು. ಆದರೆ ಸಾಧ್ಯವಾಗಲಿಲ್ಲ. ನಾಲೂ ಜನರು ಒಟ್ಟಾಗಿ ಮುರಿಯಿರಿ ಎನ್ನಲು, ಎಲ್ಲರೂ ಕೂಡಿ ಮುರಿದರು. ಈ ಸರಳ ಅನುಭವದಿಂದ ಒಗ್ಗಟ್ಟಿನ ಮಹತ್ವವನ್ನು ತಿಳಿಸಿಕೊಟ್ಟನು. ಕೂಡಿ ಬಾಳಿದರೆ ಅನ್ಯರು ನಮ್ಮನ್ನೇನೂ ಮಾಡಲಾರರು ಎಂಬುದು ತಿಳಿದು ಬರುತ್ತದೆ.

ಮಾಡಿದ್ದುಣೋ ಮಹರಾಯ : ಗಾದೆಗಳು ನೂರು ಮಾತುಗಳಲ್ಲಿ ಹೇಳಲಾಗದ ವಿಚಾರವನ್ನು ಸರಳವಾಗಿ ಹೇಳುತ್ತವೆ. ಗಾದೆಗಳಿಂದ ಜೀವನದಲ್ಲಿ ಅನೇಕ ರೀತಿಯಲ್ಲಿ ಮಾರ್ಗದರ್ಶನವನ್ನು ಪಡೆಯಬಹುದು. ಅಂತಹ ಮಾರ್ಗದರ್ಶಿ ಗಾದೆಗಳಲ್ಲೊಂದು ಮಾಡುದ್ದುಣೋ ಮಹಾರಾಯ, ಜೀವನದಲ್ಲಿ ಮಾಡುವ ಅನೇಕ ಕಾರ್ಯಗಳಲ್ಲಿ ಒಳ್ಳೆಯ ಕಾರ್ಯಗಳೂ ಇರುತ್ತವೆ. ಕೆಟ್ಟ ಕಾರ್ಯಗಳೂ ಇರುತ್ತವೆ. ಒಳ್ಳೆಯ ಕಾರ್ಯಗಳಿಗೆ ಒಳ್ಳೆಯ ಫಲ ದೊರೆತರೆ, ಕೆಟ್ಟ ಕೆಲಸಗಳಿಗೆ ಕೆಟ್ಟ ಫಲ ದೊರೆಯುತ್ತದೆ. ಇರು ಪ್ರಕೃತಿ ನಿಯಮ. ಆದರೆ ಮಾನವನು ಕೆಟ್ಟ ಕಾರ್ಯಗಳನ್ನು ಮಾಡಿಯೂ ಒಳ್ಳೆಯ ಫಲವನು ಬಯಸುತ್ತಾನೆ. ಆದರೆ ಪಾಪ ಕಾರ್ಯಗಳಿಗೆ ಪಾಪದ ಫಲವನ್ನು ಬಯಸುವುದಿಲ್ಲ. ಆದರೆ ಮಾಡಿದ ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಅನುಭವಿಸಲೇಬೇಕು. ಜಗತ್ತಿನಲ್ಲಿ ಒಳಿತನ್ನು ಬಯಸಿದ್ದಲ್ಲಿ ಕನಿಷ್ಟ ಒಳ್ಳೆಯ ಕಾರ್ಯಗಳನ್ನಾದರೂ ಮಾಡಲು ಯೋಚಿಸಬೇಕು. ಇಲ್ಲದಿದ್ದರೆ ಮಾಡಿದ್ದುಣ್ಣೆ ಮಹರಾಯ ಎಂಬಂತೆ ಶಿಕ್ಷೆ ಅನುಭವಿಸುವುದು ತಪ್ಪಿದ್ದಲ್ಲ.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ: ನಗರದ ಉದ್ಯಾನಗಳಲ್ಲಿ ಗಿಡಗಳನ್ನು ಪಕ್ಷಿ, ಪ್ರಾಣಿಗಳ ಅಥವಾ ವಿವಿಧ ವಸ್ತುಗಳ ಆಕಾರಗಳಲ್ಲಿ ಬೆಳೆಸಿರುವುದನ್ನು ನೋಡಿರಬಹುದು. ಇದು ಸಾಧ್ಯವಾಗುವುದು ಅವು ಇನ್ನೂ ಎಳೆಯಾಗಿರುವಾಗಲೆ ಅವುಗಳನ್ನು ಬೇಕಾದ ಆಕಾರಕ್ಕೆ ಬಗ್ಗಿಸಿ ಬೆಳೆಸಬೇಕು. ಗಿಡಗಳು ಬಲಿತ ಮೇಲೆ ಹೀಗೆ ಬಗ್ಗಿಸುವುದು ಸಾಧ್ಯವಿಲ್ಲ. ಹೆಚ್ಚು ಬಲ ಪ್ರಯೋಗದಿಂದ ಬಗ್ಗಿಸಲು ಪ್ರಯತ್ನಿಸಿದರೆ ಕೊಂಬೆಗಳು ಮುರಿದೇ ಹೋಗುತ್ತವೆ. ಈ ಸಂಗತಿಯನ್ನು ಮನುಷ್ಯ ಪ್ರಪಂಚಕ್ಕೂ ಅನ್ವಯಿಸಿ ನೋಡಿದ್ದರಿಂದ ಮೇಲಿನ ಗಾದೆ ಹುಟ್ಟಿಕೊಂಡಿದೆ. ಮಕ್ಕಳ ಮನಸ್ಸು ಎಳೆಯ ಗಿಡದಂತೆ ಮೃದುವಾಗಿರುತ್ತದೆ. ಆಗ ಉಚಿತ ಬೋಧನೆ, ಅಗತ್ಯ ಬಿದ್ದರೆ ಸ್ವಲ್ಪ ದಂಡನೆ, ಉತ್ತಮ ಆದರ್ಶಗಳ ಮೂಲಕ ಒಳ್ಳೆಯ ಗುಣಗಳು ಮೈಗೂಡುವಂತೆ ಮಾಡುವುದು ಸಾಧ್ಯ. ಅನುಕೂಲ ವಾತಾವರಣ, ಆದರ್ಶ ಶಿಕ್ಷಣ ದೊರೆತ ಮಕ್ಕಳು ಉತ್ತಮವೂ ದೃಢವೂ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾರೆ. ದೇಶದ ಗೌರವಸ್ಥೆ ಪ್ರಜೆಗಳೂ, ಸಮಾಜದ ಸಭ್ಯ ಸದಸ್ಯರೂ ಆಗಿದ್ದೂ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುತ್ತಾರೆ. ಆದರೆ, ಈಚೀಚೆಗೆ ಯುವಜನರಲ್ಲಿ ಕಾಣುತ್ತಿರುವ ಅಶಿಸ್ತು, ಸ್ವಾರ್ಥ, ದೌರ್ಜನ್ಯ, ಲೋಲುಪತೆ, ಅಸಭ್ಯ ವರ್ತನೆ ಇವುಗಳನ್ನು ಗಮನಿಸಿದಾಗ ಇವರಿಗೆ ಬಾಲ್ಯದಲ್ಲಿ ಉತ್ತಮವಾದ ಶಿಕ್ಷಣ ದೊರೆತಿರಲಾರದು. ಹೀಗೆ ಬೆಳೆದವರನ್ನು ತಿದ್ದುವುದು ಬಹಳ ಕಷ್ಟ. ಅಂತಹ ಸಂದರ್ಭದಲ್ಲಿ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ ? ಎಂಬ ಗಾದೆ ಮಾತನ್ನು
ಬಳಸುತ್ತಾರೆ.

ದಿನಾಂಕ : 12-08-2018

48:
ಇಂದ,
ಹರ್ಷಿಣಿ
ವಿವೇಕಾನಂದ ಪ್ರೌಢಶಾಲೆ
10ನೇ ತರಗತಿ ‘ಬಿ’ ವಿಭಾಗ, ವಿಜಯಪುರ

ಇವರಿಗೆ,
ಸಂಪಾದಕರು,
ಹೊಸ ದಿಗಂತ ದಿನಪತ್ರಿಕೆ,
ಬಳೆಪೇಟೆ, ವಿಜಯಪುರ.
ಮಾನ್ಯರೇ,

ವಿಷಯ : ಗಣರಾಜ್ಯೋತ್ಸವ ಆಚರಣೆಯ ವರದಿಯನ್ನು ಪ್ರಕಟಿಸುವಂತೆ ಕೋರಿ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ನಮ್ಮ ಶಾಲೆಯಲ್ಲಿ ದಿನಾಂಕ 26-01-2018 ರಂದು ಗಣರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಚಲನಚಿತ್ರ ನಿರ್ದೇಶಕರಾದ ಶ್ರೀ ದೊರೈಭಗವಾನ್ ರವರು ಭಾಗವಹಿಸಿ ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಂದು ದೇಶ ಭಕ್ತಿಯನ್ನು ಮೂಡಿಸುವಂತಹ ಗೀತೆಗಳು, ನೃತ್ಯ, ಸ್ತಬ್ದ ಚಿತ್ರಗಳು ಇದ್ದು ಎಲ್ಲರನ್ನೂ ರಂಜಿಸಿದವು. ಈ ಪತ್ರದೊಂದಿಗೆ ಸಚಿತ್ರ ವರದಿಯನ್ನು ಕಳುಹಿಸುತ್ತಿದ್ದೇನೆ. ಅದನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುವಂತೆ ಕೇಳಿಕೊಳ್ಳುತ್ತೇನೆ. ಧನ್ಯವಾದಗಳೊಂದಿಗೆ.

ತಮ್ಮ ವಿಶ್ವಾಸಿ.
ಹರ್ಷಿಣಿ

ಅಥವಾ
ಶ್ರೀ

ದಿನಾಂಕ : 30-1-2018

ಕ್ಷೇಮ
ಅಶೋಕ
10ನೇ ತರಗತಿ,
ಸರ್ಕಾರಿ ಪ್ರೌಢಶಾಲೆ, ಹಾಸನ.

ಮಾತೃಶ್ರೀಯವರಿಗೆ,
ನಿಮ್ಮ ಮಗ ಮಾಡುವ ಅನಂತ ನಮಸ್ಕಾರಗಳು.
ನಾನು ಇಲ್ಲಿ ಕ್ಷೇಮ. ಅಲ್ಲಿ ನಿಮ್ಮ ಕ್ಷೇಮಸಮಾಚಾರಕ್ಕೆ ಪತ್ರ ಬರೆಯಿರಿ. ನ
ಮ್ಮ ಶಾಲೆಯಲ್ಲಿ ಇದೇ ತಿಂಗಳು 26ರಂದು ಶಾಲಾ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ನಾನು ಈ ವಾರ್ಷಿಕೋತ್ಸವದಲ್ಲಿ ನಾಟಕದಲ್ಲಿ ಭಾಗವಹಿಸಿದ್ದೆ. ಈ ಕಾರ್ಯಕ್ರಮವನ್ನು ಶ್ರೇಷ್ಠ ವಿಜ್ಞಾನಿ ಸಿ.ಎನ್.ಆರ್ ರಾವ್ ರವರು ಉದ್ಘಾಟಿಸಿದರು. ಕಾರ್ಯಕ್ರಮವು ಸಂಜೆ ಆರು ಘಂಟೆಗೆ ಪ್ರಾರಂಭವಾಯಿತು. ಹಾಡು, ನೃತ್ಯ, ನಾಟಕ ಎಲ್ಲವೂ ವಾರ್ಷಿಕೋತ್ಸವದಲ್ಲಿ ಸಮ್ಮಿಳಿತಗೊಂಡಿದ್ದವು.ಈ ವಾರ್ಷಿಕೋತ್ಸವ ಸಮಾರಂಭ ಕುವೆಂಪು ಮಂದಿರದಲ್ಲಿ ನಡೆಯಿತು.ಒಟ್ಟಾರೆ ಕಾರ್ಯಕ್ರಮವು ಅತ್ಯುದ್ಭುತವಾಗಿ ಮೂಡಿ ಬಂತು. ನಮ್ಮ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯುತ್ತವೆ. ನಾನು ಇಲ್ಲಿ ಚೆನ್ನಾಗಿ ಓದುತ್ತಿದ್ದೇನೆ. ನನ್ನ ಬಗ್ಗೆ ಚಿಂತಿಸಬೇಡಿ. ನಿಮ್ಮ ಆರೋಗ್ಯದ ಕಡೆಗೆ ಗಮನವಿರಲಿ. ತೀರ್ಥರೂಪುರವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ. ಇನ್ನೇನು ವಿಷಯವಿಲ್ಲ. ಬಂದಾಗ ಎಲ್ಲ ವಿಚಾರಗಳನ್ನು ಮಾತನಾಡೋಣ.

ಇಂತಿ ನಮಸ್ಕಾರಗಳೊಂದಿಗೆ
ನಿಮ್ಮ ಮಗ ಅಶೋಕ

ಹೊರವಿಳಾಸ:
ಶ್ರೀಮತಿ ಜಯಲಕ್ಷ್ಮಿ
ಜಯಲಕ್ಷ್ಮಿಪುರಂ, ಮೈಸೂರು.

ಉತ್ತರ 49:
ತ್ಯಾಜ್ಯವಸ್ತುಗಳ ನಿರ್ವಹಣೆ: ತ್ಯಾಜ್ಯವಸ್ತುಗಳು ಎಂದರೆ ಉಪಯೋಗಿಸಲು ಯೋಗ್ಯವಲ್ಲದ ವಸ್ತುಗಳು. ಇಂತಹ ವಸ್ತುಗಳು ಅನವಶ್ಯಕವಾಗಿ ಹೊರಹಾಕುವ ಬದಲು ಅದನ್ನೇ ಉಪಯೋಗಿಸಿ ಹೊಸ ವಸ್ತುಗಳನ್ನು ತಯಾರಿಸಬಹುದು. ಆಗ ವಸ್ತುಗಳು ಉಪಯೋಗಕ್ಕೂ ಬರುತ್ತದೆ, ಪರಿಸರದಲ್ಲಿ ಮಾಲಿನ್ಯವು ಕಡಿಮೆಯಾಗುತ್ತದೆ. ಇದನ್ನೇ ಕಸದಿಂದ ರಸವನ್ನು ತಯಾರಿಸುವುದು ಎಂದು ಹೇಳುವುದು. ಭಾರತ ಒಂದು ಅಭಿವೃದ್ಧಿಹೊಂದುತ್ತಿರುವ ರಾಷ್ಟ, ಜೊತೆಗೆ ಅತಿಯಾದ ಜನಸಂಖ್ಯೆ, ಹಳ್ಳಿಗಳ ದೇಶವಾಗಿರುವ ನಮ್ಮ ದೇಶದಲ್ಲಿ ಅವಶ್ಯವಾಗಿ ತ್ಯಾಜ್ಯ ವಸ್ತುಗಳ ಮರುಬಳಕೆ ಆಗಲೇ ಬೇಕು. ಮಾಲಿನ್ಯವನ್ನು ತಡೆಗಟ್ಟಲು ಇದು ಸಹಾಯಕಾರಿಯಾಗುತ್ತದೆ. ಸಿಡರ್ ಲ್ಯಾಂಡ್ ನಂತಹ ಮುಂದುವರಿದ ದೇಶಗಳಲ್ಲಿಯೇ ಪ್ಲಾಸ್ಟಿಕ್ ಕವರ್ ಗಳಲ್ಲಿ ಸುಂದರವಾದ ಪಕ್ಷಿಗಳನ್ನು ಮಾಡಿ ಪ್ಲಾಸ್ಟಿಕ್ ಮರಗಳ ಮೇಲೆ ಇಡುತ್ತಾರೆ. ಹರಿದು ಹೋಗಿರುವ ಪೇಪರ್‌ಗಳಲ್ಲಿ ಸುಂದರವಾದ ಹೂವುಗಳನ್ನು ಮಾಡುತ್ತಾರೆ. ತ್ಯಾಜ್ಯವಸ್ತುಗಳನ್ನು ಎಲ್ಲೆಂದರಲ್ಲಿ ಹಾಕಿ ಮಾಲಿನ್ಯವನ್ನು ಮಾಡುವುದಕ್ಕಿಂತಲೂ ಅವುಗಳನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುವುದರಿಂದ ದೇಶದ ಅಭಿವೃದ್ಧಿ ಯಾಗುವುದಲ್ಲದೆ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗ ದೊರೆತಂತಾಗುತ್ತದೆ.

ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಯಲ್ಲಿ ಸಾಮಾಜಿಕ ಜಾಲತಾಣಗಳ ಸದ್ಬಳಕೆ: ಇಂದಿನ ಯುಗವನ್ನು ವಿಜ್ಞಾನದ ಯುಗ ಎನ್ನುತ್ತಾರೆ. ಏಕೆಂದರೆ ಇಂದು ಈ ಲೋಕ ವಿಜ್ಞಾನಮಯವಾಗಿದೆ. ಈ ಹೊಸ ಕಾಲದಲ್ಲಿ ಬದುಕುತ್ತಿರುವ ನಾವು ಎಷ್ಟೋ ವಿಷಯಗಳಲ್ಲಿ ಹಿಂದಿನವರಿಗಿಂತ ಅದೃಷ್ಟವಂತರು. ಈಗ ಇಂತಹ ಅನುಕೂಲವಿಲ್ಲ ಎನ್ನುವಂತೆಯೇ ಇಲ್ಲ. ನಮಗೆ ಬೇಕಾದ ಎಲ್ಲಾ ಬಗೆಯ ವಸ್ತುಗಳೂ ಈಗ ಸಿಗುತ್ತವೆ. ಎಲ್ಲಾ ಬಗೆಯ ಅನುಕೂಲಗಳೂ ಸಿಗುತ್ತವೆ. ಇದೇ ಈ ಆಧುನಿಕ ಯುಗದ ಹಿರಿಮೆ. ಮಂಗನಂತಿದ್ದ ಮಾನವ ಮೇಧಾವಿ ಮಾನವನಾದಂತೆ ಅವನ ಸಾಮಾನ್ಯ ಬುದ್ದಿಯೂ ಮಹಾಬುದ್ದಿಯಾಗಿ ಬೆಳೆದಿದೆ. ಅವನ ಅಗಾಧವಾದ ವೈಜ್ಞಾನಿಕ ಸಾಧನೆಯ ಫಲವಾಗಿಯೇ ನಮ್ಮ ಜೀವನ ಸುಲಭವಾಗುತ್ತಿದೆ. ಸರಳವಾಗುತ್ತಿದೆ. ಸುಖಿಯೂ ಆಗುತ್ತಿದೆ.

ವಿಜ್ಞಾನಿಗಳು ತ್ಯಾಗ ಜೀವಿಗಳು, ಶ್ರಮಜೀವಿಗಳು. ಅವರು ಜನತೆಯ ಅನುಕೂಲಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿ ಇಡುತ್ತಾರೆ. ವರ್ಷಾನುಗಟ್ಟಲೇ ಶೋಧನೆ – ಸಂಶೋಧನೆಗಳನ್ನು ಮಾಡಿ, ಏನಾದರೂ ಒಂದು ಅದ್ಭುತವನ್ನು ಕಂಡು ಹಿಡಿಯುತ್ತಾರೆ. ಅದು ಸಾಮಾನ್ಯ ಜನತೆಗೆ ವರವೇ ಆಗುತ್ತದೆ. ಟೆಲಿಫೋನು, ರೇಡಿಯೋ, ಟೆಲಿವಿಶನ್, ಕಂಪ್ಯೂಟರ್ ಹೀಗೆ ನೂರಾರು ಬಗೆಯ ತಂತ್ರಗಳು, ಹೀಗೆ ಹೇಳಿದಷ್ಟೂ ಮುಗಿಯುವುದೇ ಇಲ್ಲ.ಆಧುನಿಕ ವಿಜ್ಞಾನದ ಕೊಡುಗೆಯಾದ ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ಜ್ಞಾನಾಭಿವೃದ್ದಿಗೆ ಪ್ರತಿಯೊಂದು ಹಂತದಲ್ಲೂ ಸಹಕಾರಿಯಾಗಿವೆ. ಉದಾ : ಕಂಪ್ಯೂಟರ್ ಇದರಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಸಕಲ ಮಾಹಿತಿಗಳು ಅಂತರ್ ಜಾಲದ ಮೂಲಕ ತಿಳಿಯುತ್ತದೆ. ವಿದ್ಯಾರ್ಥಿಗಳು ತಮಗಿರುವ ಸಮಸ್ಯೆಗಳನ್ನು ಇದರ ಮೂಲಕ ನಿವಾರಿಸಿಕೊಳ್ಳಬಹುದು. ಅಲ್ಲದೆ ತಾವೇ ಹೊಸ ಹೊಸ ವಿಚಾರಗಳನ್ನು ಕಲಿಯಲು ಇದು ಸಹಾಯ ಮಾಡುತ್ತದೆ. ಯಾವುದೇ ವಿಷಯದ ಬಗ್ಗೆ ಸರಿಯಾದ ಮಾಹಿತಿ ನೀಡಿದರೆ ಸಾಕು, ಅದರ ಫಲಿತಾಂಶವನ್ನು ನಿಖರವಾಗಿ ತೋರಿಸಿ ಬಿಡುತ್ತದೆ. ಆದರೆ ಎಲ್ಲವನ್ನು ಮಿತವಾಗಿ ಬಳಸಿದಾಗ ಮಾತ್ರ ಅದರ ಸದ್ಬಳಕೆ ಸಾದ್ಯ.

ಕರ್ನಾಟಕದ ನದಿ ನೀರಿನ ಸಮಸ್ಯೆಗಳು : ಕರ್ನಾಟಕದಲ್ಲಿ ಸರಿಯಾದ ರೀತಿಯಲ್ಲಿ ನೀರಿನ ಬಳಕೆಯಾದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಮಳೆಗಾಲದಲ್ಲಿ ಶೇಖರಣೆಯಾದ ನೀರು ಬೇಸಿಗೆಯಲ್ಲೂ ಪ್ರಯೋಜನಕ್ಕೆ ಬರಬೇಕೆಂದರೆ ನೀರನ್ನು ಹಿಡಿದಿಟ್ಟುಕೊಳ್ಳುವ ಅಣೆಕಟ್ಟುಗಳು ಹೆಚ್ಚಾಗಬೇಕು. ಇತರ ಅಕ್ಕ ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅನೇಕ ನದಿಗಳಿವೆ. ದೇಶದ ನದಿ, ಕಾಡು, ಮರುಭೂಮಿ, ಪರ್ವತ ಮೊದಲಾದವುಗಳಿಗೆ. ಭಾಷೆ-ಗಡಿರೇಖೆಗಳ ಹಂಗಿಲ್ಲ. ತಾನು ಇಂಥಾ ರಾಜ್ಯದಲ್ಲಿ ಮಾತ್ರ ಹರಿಯುತ್ತೇನೆ ಎಂದು ಅದು ಎಂದೂ ಹೇಳಿಲ್ಲ. ಕರ್ನಾಟಕ ತಮಿಳುನಾಡುಗಳ ನಡುವೆ ಹರಿಯುವ ಕಾವೇರಿಗೆ ತಾನು ಎರಡು ಭಾಷೆಗಳ, ಎರಡು ರಾಜ್ಯಗಳ ನಡುವೆ ಎದ್ದಿರುವ ದೊಡ್ಡದೊಂದು ವಿವಾದದ ಕೇಂದ್ರಬಿಂದು ಎಂದೂ ಗೊತ್ತಿಲ್ಲ. ಕಾವೇರಿಗೆ ಕರ್ನಾಟಕದ ಜನ ಹೇಗೆ ಮಕ್ಕಳೊ ತಮಿಳರೂ ಹಾಗೆಯೇ, ಗಡಿ ರೇಖೆ ಹಾಕಿಕೊಂಡಿರುವ ನಾವು ನಮ್ಮ ಲಾಭಕ್ಕಾಗಿ ಅಣೆಕಟ್ಟು ಕಟ್ಟಿ ನಿಲ್ಲಿಸುತ್ತೇವೆ. ಕಾಲುವೆ ತೋಡಿ ನೀರನ್ನು ಬೇರೊಂದು ದಿಕ್ಕಿಗೆ ಹರಿಸುತ್ತೇವೆ.

ಅದು ಕೇವಲ ನಮ್ಮ ಸ್ವಾರ್ಥಕ್ಕಾಗಿ ನಾವು ಮಾಡಿಕೊಂಡಿರುವ ವ್ಯವಸ್ಥೆ ಅಷ್ಟೆ, ತನ್ನ ದಾರಿಯುದ್ದಕ್ಕೆ ಎಷ್ಟು ಊರುಗಳಿವೆಯೋ ಅಷ್ಟೂ ಊರುಗಳ ಬಾಯಾರಿಕೆ ತಣಿಸಲು ಬೇಕಾದಷ್ಟು ನೀರನ್ನು ಪ್ರತಿಯೊಂದು ನದಿಯೂ ಖಂಡಿತ ಒದಗಿಸುತ್ತದೆ. ಆದರೆ ರೈತರು ಅಕ್ಷರಸ್ಥರಾಗಿ ತಮ್ಮ ತಮ್ಮ ಹೊಲಗದ್ದೆಗಳ ಬಳಿಯಲ್ಲಿ ನೀರನ್ನು ಶೇಖರಿಸಿಕೊಟ್ಟುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಮಳೆಕೊಯ್ಲಿನಂಥ ಉತ್ತಮ ವೈಜ್ಞಾನಿಕ ವಿಧಾನವನ್ನು ಅನುಸರಿಸಿದರೆ ವರ್ಷ ಪೂರ್ತಿ ಎಲ್ಲಾ ನದಿಯಲ್ಲೂ ನೀರು ತುಂಬಿ ಹರಿಯುವಂತೆ ಮಾಡಬಹುದು. ನದಿಜೋಡಣೆ ಕಾರ್ಯಕ್ರಮವನ್ನು ಕೈಗೊಂಡಾಗ ನೀರಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಒಂದೇ ರಾಜ್ಯದ ಒಳಗೆ ಇರುವ ಎರಡು ಪ್ರದೇಶಗಳಲ್ಲಿ ತದ್ವಿರುದ್ದ ಪರಿಸ್ಥಿತಿ ಇದೆ. ಒಂದು ಕಡೆ ತುಂಬಿ ಹರಿಯುವ ನದಿ, ಇನ್ನೊಂದು ಕಡೆ ಮಳೆಯಿಲ್ಲದೆ ಖಾಲಿ ಕೂತ ಬಯಲು ಪ್ರದೇಶ. ಈ ಅಸಮಾನತೆ ಕಳೆಯಲು ತುಂಬಿ ಹರಿಯುವ ನದಿಯಲ್ಲಿ ಹರಿದುಹೋಗುವ ಹೆಚ್ಚುವರಿ ನೀರನ್ನು ಬಯಲು ಸೀಮೆಯತ್ತ ಸಾಗಿಸಿದರೆ ಸ್ವಲ್ಪ ಸಮಸ್ಯೆಯನ್ನು ಬಗೆಹರಿಸಬಹುದು. ಇನ್ನೊಂದು ಪರಿಹಾರವೆಂದರೆ ಬೆಂಗಳೂರಿನಲ್ಲಿ ಹೊರಹಾಕುವ ಕೊಳಚೆಯನ್ನು ಸಂಸ್ಕರಿಸಿದರೆ ಕರ್ನಾಟಕದ ಐದಾರು ಜಿಲ್ಲೆಗಳಿಗೆ ನೀರುಣಿಸಬಹುದು. ಆದರೆ ಸರ್ಕಾರದೊಂದಿಗೆ ಜನ ಕೈ ಜೋಡಿಸಿದಾಗ ಮಾತ್ರ ಸಮಸ್ಯೆಯಿಂದ ಹೊರಬರಲು ಸಾಧ್ಯ.

Karnataka SSLC Kannada Model Question Papers

error: Content is protected !!